ಹುಕ್ಕೇರಿ: ತಾಲ್ಲೂಕಿನ ಎಲಿಮುನ್ನೋಳಿಯಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ, ಪೂಜೆಗಳ ಮೂಲಕ ವರುಣನ ಕೃಪೆಗೆ ಗ್ರಾಮಸ್ಥರು ಹಾಗೂ ನೆರೆಯ ಗ್ರಾಮಗಳ ನೂರಾರು ಜನರು ಶುಕ್ರವಾರ ಪ್ರಾರ್ಥಿಸಿದರು. ಮಳೆಯ ಕೊರತೆಯಿಂದ ನಾಡಿನ ಜನತೆ ಹಾಗೂ ರೈತಾಪಿ ವರ್ಗ ಕಂಗಾಲಾಗಿ ದೇವರ ಮೊರೆ ಹೋಗಿ ವಿಶೇಷ ಪೂಜೆ, ಪುನಸ್ಕಾರಗಳ ಮೂಲಕ ಪ್ರಾರ್ಥಿಸುತ್ತಿದ್ದಾರೆ.
ಅದರಂತೆ ತಾಲ್ಲೂಕಿನ ಎಲಿ ಮುನ್ನೋಳಿ ಗ್ರಾಮದಲ್ಲಿ ಯುವಕರು, ಹಿರಿಯರು ಹಾಗೂ ಮಹಿಳೆಯರು ವಾರ ಪಾಲಿಸಿ, ಗ್ರಾಮದ ಎಲ್ಲ ದೇವರಿಗೆ ಜಲಾಭಿಷೇಕ, ಪೂಜೆ ಹಮ್ಮಿಕೊಳ್ಳು ವುದರ ಜತೆಗೆ ಆ ದಿನ ಎತ್ತುಗಳನ್ನು ಹೂಡುವುದು, ಕುಟ್ಟು ವುದು, ಬೀಸುವುದು, ಕರಿಯುವುದು ಮತ್ತು ಉರಿಯುವುದನ್ನು ಬಿಟ್ಟು ಕೇವಲ ದೇವರ ಪ್ರಾರ್ಥನೆಗೆ ಮೀಸಲಾಗಿರುತ್ತಿದ್ದರು.
ಐದು ವಾರ ಪೂರೈಸಿದ ಪ್ರಯುಕ್ತ ಶುಕ್ರವಾರ ವಿಶೇಷ ಪೂಜೆ, ಪೂರ್ಣಕುಂಭ ಮೇಳ, ಮಹಾಪ್ರಸಾದ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ನೆರೆಯ ಗ್ರಾಮ ಗಳಾದ ಹಣಜ್ಯಾನಟ್ಟಿ, ಬೆಳವಿ, ಶೇಲಾಪೂರ, ಯಾದಗೂಡ, ಅಮ್ಮಣಗಿ, ನೇರಲಿ, ಮಸರಗುಪ್ಪಿಯ ನೂರಾರು ಜನರು ಪಾಲ್ಗೊಂಡಿದ್ದರು.