ದೇವನಹಳ್ಳಿ: ಸ್ಥಳೀಯ ರೈತರ ಜೀವನಾಡಿಯಾಗಿ ಸಹಕಾರಿ ಕ್ಷೇತ್ರದ ಬ್ಯಾಂಕುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ರವಿ ತಿಳಿಸಿದರು.
ತಾಲ್ಲೂಕಿನ ಬಿದಲೂರು ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ ಗುರುವಾರ ಸಹಕಾರಿ ಸಂಘದ ಸದಸ್ಯರಿಗೆ ಕಿಸಾನ್ ರೂಪೆ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಸಹಕಾರ ಕೇಂದ್ರ ಹಾಗೂ ಕೃಷಿ ಸಂಪತ್ತಿನ ಸಹಕಾರ ಸಂಘ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
ಸಾಲ ಪಡೆದು ತೀರುವಳಿಯಲ್ಲಿ ದೇವನಹಳ್ಳಿ ಹಾಗೂ ಹೊಸಕೋಟೆ ರೈತರು ಮುಂದಿದ್ದಾರೆ. ಇತರೆ ತಾಲ್ಲೂಕಿನಲ್ಲಿ ರೈತರಿಗೆ ಆ ಮನಸ್ಥಿತಿ ಇಲ್ಲ, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪೈಪೋಟಿ ನೀಡಲು ರೂಪೆ ಕಾರ್ಡ್, ಠೇವಣಿ, ಆರ್.ಟಿ.ಜಿ.ಎಸ್. ಇತರೆ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ₹8600 ಕೋಟಿ ಸಾಲ ಮನ್ನಾದ ಮೂಲಕ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ, ದೇವನಹಳ್ಳಿ ತಾಲ್ಲೂಕಿನಲ್ಲಿ 5162 ರೈತರು 24ಕೋಟಿ ಸಾಲ ಪಡೆದಿದ್ದು ಸಾಲ ಮನ್ನಾದಿಂದ ₹21.18ಕೋಟಿ ನೆರವು ಸಿಕ್ಕಿದೆ. ಪ್ರಸ್ತುತ ಮುಂಗಾರಿನಲ್ಲಿ ಶೇ46ರಷ್ಟು ಮಳೆ ಕೊರತೆ ಎದುರಾಗಿದ್ದು ರೈತರು ಎದೆಗುಂದಬಾರದು ಎಂದರು.
ತಾಲ್ಲೂಕಿನಲ್ಲಿ ಬಿ.ಡಿ.ಸಿ.ಸಿ. ಬ್ಯಾಂಕ್ ಕಟ್ಟಡಕ್ಕೆ ಚಿಂತನೆ ಇದೆ, ನಿವೇಶನ ಗುರುತಿಸಿ ಕೊಟ್ಟರೆ ಸಹಕಾರ ನೀಡಲಾಗುವುದು ಎಂದರು. ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ಗ್ರಾಮ ಪಂಚಾಯಿತಿ ಮತ್ತು ಸಹಕಾರ ಸಂಘಗಳು ಸ್ಥಳೀಯ ನಾಯಕರನ್ನು ಗುರುತಿಸುವ ಕೇಂದ್ರಗಳು, ತಾಲ್ಲೂಕಿನಲ್ಲಿ ರೇಷ್ಮೆ ಮತ್ತು ಹೈನು ಉದ್ದಿಮೆ ಬೆಳವಣಿಗೆಯಿಂದ ರೈತರು ಉಸಿರಾಡುವಂತಾಗಿದೆ ಎಂದರು.
ಎಪಿಎಂಸಿ ನಿರ್ದೇಶಕ ಕೆ.ವಿ.ಮಂಜುನಾಥ್ ಮಾತನಾಡಿ, ತಾಲ್ಲೂಕು ಸಹಕಾರ ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲದೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಸೂಕ್ತ ಜಾಗ ಮತ್ತು ಅಗತ್ಯ ಅನುದಾನಕ್ಕೆ ಸಹಕರಿಸಬೇಕು ಎಂದರು.
ಬಿಡಿಸಿಸಿ ನಿರ್ದೇಶಕ ಸೊಣ್ಣಪ್ಪ ಮಾತನಾಡಿದರು, ಬಿದಲೂರು ವಿಎಸ್ಎಸ್ಎನ್ ಅಧ್ಯಕ್ಷ ಎಂ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು ಜಿಲ್ಲಾ ಬಿಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಿಂಗರಾಜು, ಜಿಲ್ಲಾ ಪಂಚಾಯಿತಿ ಸದಸ್ಯೆ ರಾಧಮ್ಮ ಮುನಿರಾಜು, ಒಕ್ಕಲಿಗರ ಸಂಘ ತಾಲ್ಲೂಕು ಅಧ್ಯಕ್ಷ ಕೆ.ಸಿ.ವೆಂಕಟೇಶಗೌಡ, ಜಿಲ್ಲಾ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರವಿಶಯ್ಯ, ಟಿ.ಎ.ಪಿ.ಎಂ.ಸಿ.ಎಸ್.ಅಧ್ಯಕ್ಷ ಶ್ರೀನಿವಾಸಮೂರ್ತಿ, ನಿರ್ದೇಶಕರಾದ ಮಂಡಿಬೆಲೆ ರಾಜಣ್ಣ,ರವಿ, ಕೆ.ರಮೇಶ್, ಎಸ್.ನಾಗೇಶ್, ಶ್ರೀರಾಮಯ್ಯ, ನಾಗೇಶ್, ವನಜಾಕ್ಷಿ, ಚಿಕ್ಕನಾರಾಯಣಸ್ವಾಮಿ, ರಾಮಾಂಜಿನಪ್ಪ, ತಿಮ್ಮಯ್ಯ, ನೇತ್ರಾವತಿ, ಕಾರ್ಯನಿರ್ವಹಣಾಧಿಕಾರಿ ಕೆ.ವೆಂಕಟೇಶ್, ಜಿಲ್ಲಾ ಸಹಕಾರಿ ಯುನಿಯನ್ ಬ್ಯಾಂಕ್ ಅಧ್ಯಕ್ಷ ಎ.ಸಿ.ನಾಗರಾಜ್ ಇದ್ದರು.
* *
ತಾಲ್ಲೂಕಿನಲ್ಲಿರುವ 16 ಸಹಕಾರ ಸಂಘಗಳು ಉತ್ತಮ ಕಾರ್ಯ ನಿರ್ವಹಿಸುತ್ತಿವೆ. ಬಯಲು ಸೀಮೆಯಲ್ಲಿ ಅಂತರ್ಜಲದ ಸಮಸ್ಯೆ ತೀವ್ರವಾಗುತ್ತಿದೆ
ಪಿಳ್ಳಮುನಿಶಾಮಪ್ಪ , ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.