ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಧಿವೃಕ್ಷ

Last Updated 15 ಜುಲೈ 2017, 19:30 IST
ಅಕ್ಷರ ಗಾತ್ರ

–ಡಾ.ಪದ್ಮಿನಿ ನಾಗರಾಜು

ಶಾಕ್ಯ ವಂಶದ ಕುಡಿ
ಶುದ್ಧೋದನನ ಕನಸು
ತನ್ನದೆಲ್ಲವ ಬಿಟ್ಟು
ನನ್ನ ಬಳಿ ಬರುವೆನೆಂದಾಗ
ನಾನು ಹುಟ್ಟಿದ್ದಕ್ಕೂ ಬೇರೂ ಬಿಟ್ಟಿದ್ದಕ್ಕೂ
ಅರಳಿ ಮರವಾಗಿದ್ದಕ್ಕೂ
ಸಾರ್ಥಕವೆಂದುಕೊಂಡೆ

ಲುಂಬಿನಿಯ ಕಂದ ಸಿದ್ಧಾರ್ಥ
ಜಗದ ಜಂಜಡ ತೊರೆದು
ಸಂಸಾರದ ಬೇಡಿ ಕಿತ್ತೊಗೆದು
ಕ್ಷತ್ರಿಯತೆಯಿಂದ ಸನ್ಯಾಸಕ್ಕೆ
ಹೊರಳುವುದು ಸಾಮಾನ್ಯವೇ

ಮಾಯವತಿಯ ಮಡಿಲ ಮಗು
ಯಶೋಧರೆಯ ಮನದನ್ನ
ರಾಹುಲನ ಪಿತ ಸಂಕೋಲೆಗಳ
ಬಿಡಿಸಿಕೊಳ್ಳುವುದೇನು ಸುಲಭವೇ

ಸಿದ್ಧಾರ್ಥ ಎಲ್ಲವ ಗೆದ್ದ
ದಾರಿಯಲ್ಲಿ ಕಂಡ ಸತ್ಯವ
ಅರಸಿ ನಡುರಾತ್ರಿ ನಡೆದ
ಕಾಡಿದ ಪ್ರಶ್ನೆಗಳಿಗೆಲ್ಲಾ
ಉತ್ತರದ ಹುಡುಕಾಟ

ನನ್ನ ಬಳಿ ಬಂದಾಗ
ಅವನಲ್ಲಿ ಅದೆಷ್ಟು ಚಿಂತೆ
ಲೋಕದ ದುಃಖ ದುಗುಡವ
ಪರಿಹರಿಪ ತವಕದ ಚಡಪಡಿಕೆ

ನನ್ನ ವಿಶಾಲ ವಿಸ್ತಾರ ಬೇರುಗಳ
ಮೇಲೆ ಕುಳಿತು ಧ್ಯಾನಸ್ಥನಾದ
ಶಬ್ದಗಳೆಲ್ಲ ಕರಗಿ ನಿಶಬ್ದವಾದವು
ಮಾತು ಮೌನವಾದವು
ತನ್ನ ಅರಿವು ಜಗದಗಲ ಮುಗಿಲಗಲವಾದಾಗ
ಬುದ್ಧ ಎದ್ದ

ಬುದ್ಧ ಬಯಲಲ್ಲಿ ಹಿಮಾಲಯದಲ್ಲಿ
ಬೇರೆಲ್ಲೋ ತನ್ನ ತಾ ಕಾಣಬಹುದಿತ್ತು
ನನ್ನ ಬಳಿ ಬರುವ ಕೃಪೆ ತೋರಿದ್ದು
ಬೇರು ನೆರಳು ಆಶ್ರಯದ ಅಗ್ಗಳಿಕೆ
ಜಗಕೆ ಅರುಹಲೆಂದೇ?

ಮಾಯವತಿ ಸಾಗುವಾನಿ ಮರದ
ನೆಳಲಲ್ಲಿ ಹೆತ್ತ ಮಗುವನ್ನು
ಬೋಧಿವೃಕ್ಷ ದೇವನಾಗಿಸಿದ
ಮರದ ಮಹತ್ತಿನ ಕತೆ
ಇಂದಿನ ಮರಭಕ್ಷಕರಿಗೆ
ಪಾಠವಾಗಬೇಕಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT