ರಾಮದುರ್ಗ: ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದ ರೀತಿಯಲ್ಲಿಯೇ ನೇಕಾರರ, ಕುರಿಗಾರರ ಮತ್ತು ಮೀನು ಗಾರರ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿಗಳ ಗಮನ ಸೆಳೆಯಲಾಗಿದೆ. ಒಂದು ತಿಂಗಳಲ್ಲಿ ಈ ಕಸಬುಗಳ ನಿರ್ವಹಿಸುವವರ ಸಾಲ ಮನ್ನಾ ಮಾಡಲಾಗುವುದು ಎಂದು ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ತಾಲ್ಲೂಕಿನ ಗೊಣ್ಣಾಗರ ಗ್ರಾಮದಲ್ಲಿ ಹಮ್ಮಿಕೊಂಡ ಗೊಣ್ಣಾಗರ–ಮಾರಡಗಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಉಳಿದ ಕಸಬುಗಳನ್ನು ಮಾಡಿ ಕೊಂಡು ಜೀವನ ಸಾಗಿಸುತ್ತಿರುವ ಬಡವರ ಸಾಲ ಮನ್ನಾಕ್ಕೆ ಕ್ರಮ ಕೈಗೊಳ್ಳ ಲಾಗುವುದು ಎಂದು ತಿಳಿಸಿದರು.
ತಾಲ್ಲೂಕಿನ ಮಲಪ್ರಭಾ ನದಿಗೆ ಅಡ್ಡವಾಗಿ ಒಟ್ಟು ಮೂರು ತೂಗು ಸೇತುವೆಗಳನ್ನು ನಿರ್ಮಿಸಲಾಗುವುದು. ಶೆಟ್ಟೆವ್ವನ ದೇವಸ್ಥಾನದ ಹತ್ತಿರದಲ್ಲಿ ತೂಗು ಸೇತುವೆಯ ಕಾಮಗಾರಿ ಭಾಗಶಃ ಮುಗಿಯುವ ಹಂತದಲ್ಲಿದೆ ಎಂದು ಅಶೋಕ ಪಟ್ಟಣ ವಿವರಿಸಿದರು.
ಇನ್ನು ದೊಡಮಂಗಡಿ ಮತ್ತು ಕೊಳಚಿ ಗ್ರಾಮಗಳ ಹತ್ತಿರ ಒಂದೊಂದು ತೂಗು ಸೇತುವೆಗಳನ್ನು ನಿರ್ಮಿಸಲಾಗು ವುದು ಎಂದು ಅವರು ತಿಳಿಸಿದರು. ಶಾಸಕರಾದ ಮೇಲೆ ತಾವು ಬೆಂಗಳೂರಿಗೆ ಹೋಗಿ ಕಾಲಹರಣ ಮಾಡುತ್ತಿದ್ದಾರೆ ಎಂದು ವಿರೋಧಿಗಳು ದೂರುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳು ಮಂಜೂರಾತಿ ಆಗಬೇಕಾದರೆ ಬೆಂಗ ಳೂರಿಗೆ ಹೋಗುವುದು ಅನಿವಾರ್ಯ. ತಾಲ್ಲೂಕಿನಲ್ಲಿ ಅಭಿವೃದ್ಧಿ ಜರುಗಿದ್ದರೆ ತಮಗೆ ಮತ ನೀಡಿ ಇಲ್ಲದಿದ್ದರೆ ನೀಡಬೇಡಿ ಎಂದು ಅವರು ನೊಂದು ನುಡಿದರು.
ತಾಲ್ಲೂಕಿನಲ್ಲಿ ಜರುಗುತ್ತಿರುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಕಳಪೆ ಕಾಮಗಾರಿಗಳು ಜರುಗುತ್ತಿವೆ ಎಂದು ಬಿಜೆಪಿಯವರು ಆರೋಪಿಸುತ್ತಾರೆ. ನೂರು ಕೆಲಸಗಳಲ್ಲಿ 25ರಷ್ಟು ಕಳಪೆ ಕಾಮಗಾರಿಗಳು ಜರುಗುತ್ತಿರುವುದು ಸತ್ಯ. ಅಂಥ ಕಳಪೆ ಕಾಮಗಾರಿಗೆ ಕಾರಣರಾದ ಗುತ್ತಿಗೆದಾರರ ಬಿಲ್ ಪಾವತಿ ಆಗುವುದನ್ನು ತಡೆ ಹಿಡಿಯಲಾಗಿದೆ ಎಂದು ಶಾಸಕರು ಸಮಜಾಯಿಷಿ ನೀಡಿದರು.
ಗ್ರಾಮದ ವೀರಯ್ಯ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಬಸವ್ವ ಮಾದರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜು ಮಾನೆ, ವೀರಯ್ಯ ಚಿಕ್ಕಮಠ, ಯಲ್ಲಪ್ಪಗೌಡ ಪಾಟೀಲ, ಪರಪ್ಪ ಜಂಗವಾಡ, ಶಿವರಾಯಪ್ಪ ಕೀಲಿ, ವೀರನಗೌಡ ಪಾಟೀಲ ಮತ್ತು ಇತರರು ವೇದಿಕೆ ಮೇಲಿದ್ದರು.
ಶಿಕ್ಷಕ ಕೃಷ್ಣಾ ಯಡ್ರಾವಿ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.