ಯಾದಗಿರಿ: ನಗರಸಭೆ ವ್ಯಾಪ್ತಿಯ ಕೊಳೆಗೇರಿ ಪ್ರದೇಶಗಳ ಜ್ವಲಂತ ಸಮಸ್ಯೆಗಳ ಕುರಿತು ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಒತ್ತಾಯಿಸಿ ಸ್ಲಂಜನಾಂದೋಲನ ಜಿಲ್ಲಾ ಸಮಿತಿ ಹಾಗೂ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ಸದಸ್ಯರು ಶನಿವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
‘ಯಾದಗಿರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಜನಸಂಖ್ಯೆ ಸುಮಾರು 1 ಲಕ್ಷ ಇದ್ದು, 31 ವಾರ್ಡಗಳು ಇವೆ. ಈ ಪೈಕಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಂಕಿಅಂಶಗಳ ಪ್ರಕಾರ 15ಕೊಳಗೇರಿ ಪ್ರದೇಶಗಳನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಆಶಾಕಿರಣ ಮಾಹಿತಿಯಲ್ಲಿ 10 ಕೊಳಚೆ ಪ್ರದೇಶಗಳನ್ನು ಗುರುತಿಸಲಾಗಿದೆ. ಅಂದಾಜು ಘೋಷಿತ ಮತ್ತು ಅಘೋಷಿತ ಕೊಳಚೆ ಪ್ರದೇಶಗಳನ್ನು ನಗರ ಶೇ 25ರಷ್ಟು ಜನಸಂಖ್ಯೆಯ ಜನರು ಸ್ಲಂ ಪ್ರದೇಶಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.
ಕೊಳೆಗೇರಿಯಲ್ಲಿರುವ ಜನರ ಬದುಕು ಮತ್ತು ಅಲ್ಲಿರುವ ಮೂಲಸೌಕರ್ಯಗಳ ಕೊರತೆ ಹಾಗೂ ಮೂಲ ಸಮಸ್ಯೆಗಳತ್ತ ನಗರಸಭೆ ಕೂಡಲೇ ಗಮನಹರಿಸುವಂತೆ ಜಿಲ್ಲಾಡಳಿತ ಒತ್ತಡ ಹಾಕಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ನಗರಸಭೆ 30ದಿನಗಳೊಳಗಾಗಿ ಸಭೆ ಕರೆದು ಸಮಸ್ಯೆ ಪರಿಹರಿಸುವಂತೆ ಸ್ಲಂಜನಾಂದೋಲನಾ ಸಮಿತಿ ಸದಸ್ಯರು ಆಗ್ರಹಿಸಿದರು. ಗಮನ ಹರಿಸದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸ್ಲಂ ಜನಾಂದೋಲನ ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ, ಸ್ಲಂ ಜನಾಂದೋಲನ ಜಿಲ್ಲಾ ಅಧ್ಯಕ್ಷ ಹಣಮಂತ ಶಹಾಪೂರಕರ್, ಸಂಗೀತಾ ಹಪ್ಪಳ, ನಿರ್ಮಲಾ ನಾಟೇಕರ್, ಶಂಕ್ರಮ್ಮ ಕೋಟಿಮನಿ, ಈರಮ್ಮ ಕರಡಿ, ವಿಶ್ವನಾಥ ನಾಯ್ಕೋಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.