ಹಾಸನ: ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾದ ಹಾಸನಾಂಬ ಕಲಾಕ್ಷೇತ್ರದ ನವೀಕರಣ ಕಾರ್ಯ ಭರದಿಂದ ಸಾಗಿದೆ.
ಸಾಂಸ್ಕೃತಿಕ, ಸಾಹಿತ್ಯ, ಸಭೆ, ಸಮಾರಂಭಗಳಿಗೆ ಪ್ರಸಿದ್ಧ ವೇದಿಕೆಯಾಗಿದ್ದರೂ ಆಸನ, ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯಲ್ಲಿ ತೀವ್ರ ಸಮಸ್ಯೆ ಇತ್ತು. ಕಲಾಕ್ಷೇತ್ರಕ್ಕೆ ಕೊನೆಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾಯಕಲ್ಪ ನೀಡಲು ನಿರ್ಧರಿಸಿ, ₹ 62.70 ಲಕ್ಷ ವೆಚ್ಚದಲ್ಲಿ ನವೀಕರಣ ಕಾಮಗಾರಿ ಕೈಗೊಂಡಿದೆ.
ನಾಟಕ, ನೃತ್ಯ, ಸಂಗೀತ ಪ್ರದರ್ಶನಗಳನ್ನು ನಡೆಸಲು ಬೇಕಾಗುವ ಸೌಲಭ್ಯ ಒದಗಿಸಲಾಗುವುದು. ಸುಮಾರು ₹ 20 ಲಕ್ಷ ವೆಚ್ಚದಲ್ಲಿ ವೇದಿಕೆ ನಿರ್ಮಾಣದ ಕೆಲಸ ನಡೆಯುತ್ತಿದೆ. ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಶ್ಯವಿರುವ ರೀತಿಯಲ್ಲಿ ನವೀನ ತಾಂತ್ರಿಕತೆಯೊಂದಿಗೆ ವೇದಿಕೆ ನಿರ್ಮಿಸ ಲಾಗುತ್ತಿದ್ದು, ಎರಡು ವಾರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
ಅಲ್ಲದೇ ₹ 40 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ಲೈಟಿಂಗ್ ವ್ಯವಸ್ಥೆ ಹಾಗೂ ಧ್ವನಿವರ್ಧಕಗಳನ್ನು ಅಳವಡಿಸಲಾಗು ತ್ತಿದೆ. ಕಾರ್ಯಕ್ರಮಗಳ ಆಯೋಜನೆಗೆ ಹಾಸನಾಂಬ ಕಲಾಕ್ಷೇತ್ರ ಬೇಕೆಂದರೆ ಇನ್ನು ಮುಂದೆ ಆನ್ಲೈನ್ ಬುಕ್ಕಿಂಗ್ ಮಾಡಬೇಕು.
‘ಕಲಾಕ್ಷೇತ್ರದಲ್ಲಿ ಖಾಸಗಿ ಕಾರ್ಯಕ್ರಮಗಳು ಹೆಚ್ಚು ನಡೆಯುತ್ತವೆ. ಹೀಗಾಗಿ ಸ್ಥಳೀಯ ಕಲಾವಿದರಿಗೆ ಅನ್ಯಾಯವಾಗುತ್ತಿದೆ’ ಎಂಬ ದೂರು ಗಳು ಕಲಾವಿದರಿಂದ ಕೇಳಿ ಬಂದಿತ್ತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಯು.ಜಿತೇಂದ್ರ ನಾಥ್ ಮಾತನಾಡಿ, ‘ಕಲಾಕ್ಷೇತ್ರದ ನವೀಕರಣ ಕಾರ್ಯ ತ್ವರಿತಗತಿಯಲ್ಲಿ ಸಾಗಿದ್ದು, ತಿಂಗಳಲ್ಲಿ ಪೂರ್ಣಗೊಳ್ಳುವ ವಿಶ್ವಾಸ ಇದೆ. ಸುಸಜ್ಜಿತ ವೇದಿಕೆ, ಧ್ವನಿವರ್ಧಕ, ಲೈಟಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.
‘ನವೀಕರಣ ಕಾಮಗಾರಿ ಪೂರ್ಣಗೊಂಡ ಬಳಿಕ ಆನ್ಲೈನ್ ಬುಕ್ಕಿಂಗ್ ಮೂಲಕ ಕಲಾಕ್ಷೇತ್ರ ಬಾಡಿಗೆ ನೀಡುವ ವ್ಯವಸ್ಥೆ ಜಾರಿಗೆ ಬರಲಿದೆ. ಆಸನ ವ್ಯವಸ್ಥೆ, ಬಣ್ಣ ಬಳಿಯುವ ಕೆಲಸ ಕೈಗೆತ್ತಿಕೊಳ್ಳಲು ಅಗತ್ಯ ಅನುದಾನಕ್ಕಾಗಿ ಶೀಘ್ರವೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾ ಗುವುದು’ ಎಂದು ಅವರು ತಿಳಿಸಿದರು.
‘ಕಲಾಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನಗಳ ಸೌಲಭ್ಯ ಕಲ್ಪಿಸಲು ಇಲಾಖೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಕಾರ್ಯಕ್ರಮಗಳಿಗೆ ಹೆಚ್ಚಾಗಿ ಬಾಡಿಗೆ ನೀಡದೆ ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸುವ ಮೂಲಕ ಪ್ರೋತ್ಸಾಹಿಸಬೇಕು’ ಎಂದು ರಾಮಣ್ಣ ಆಗ್ರಹಿಸಿದರು.
**
ಹಾಸನಾಂಬ ಕಲಾಕ್ಷೇತ್ರದ ನವೀಕರಣ ಕಾರ್ಯ ತಿಂಗಳಲ್ಲಿ ಪೂರ್ಣಗೊಳ್ಳುವ ವಿಶ್ವಾಸ ಇದೆ –ಯು.ಜಿತೇಂದ್ರನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ