ಶಿಗ್ಗಾವಿ: ಶಿಗ್ಗಾವಿ ಏತ ನೀರಾವರಿ ಯೋಜನೆಯಡಿ ತಾಲ್ಲೂಕಿನ ಬಂಕಾಪುರ ಪಟ್ಟಣದ ಕೋಟೆ ಆವರಣದಲ್ಲಿರುವ ನವಿಲು ಧಾಮಕ್ಕೆ ಜುಲೈ 13ರಿಂದ ವರದಾ ನದಿಯಿಂದ ನೀರು ಹರಿದು ನೀರು ಬರುತ್ತಿದೆ. ನಾರಾಯಣಪುರ–ಬಂಕಾಪುರ ನಡುವೆ ಇರುವ ಸಂಪಿಗೆ ನೀರು ಹರಿಸಿ, ಅದರಿಂದ ನವಿಲು ಧಾಮದಲ್ಲಿರುವ ಹೊಂಡಕ್ಕೆ ನೀರು ಹರಿಸಲಾಗುತ್ತಿದೆ. ಇದರಿಂದ ಸುಮಾರು ನಾಲ್ಕು ಎಕರೆ ವಿಸ್ತೀರ್ಣದ ಹೊಂಡ ತುಂಬಲಾಗುತ್ತಿದೆ.
‘ದೇಶದ ಎರಡನೇ ನವಿಲು ಧಾಮ ಎಂಬ ಖ್ಯಾತಿಗೆ ಹೊಂದಿರುವ ಬಂಕಾಪುರ ನವಿಲು ಧಾಮದ ಅಭಿವೃದ್ಧಿಗೆ ಶಾಸಕ ಬಸವರಾಜ ಬೊಮ್ಮಾಯಿ ವಿಶೇಷ ಕಾಳಜಿ ವಹಿಸಿ ನೀರು ಹರಿಸಿರುವುದು ಹರ್ಷ ತಂದಿದೆ’ ಎಂದು ಸ್ಥಳೀಯ ನಿವಾಸಿ ಮಂಜುನಾಥ ಕೂಲಿ ಸಂತಸ ವ್ಯಕ್ತಪಡಿಸಿದ್ದಾರೆ.
‘ವರದಾ ನದಿಯಿಂದ ಹರಿ ಯತ್ತಿರುವ ನೀರು, ನವಿಲುಗಳ ಜತೆಗೆ ಬಂಕಾಪುರ ಜನರಿಗೂ ವರವಾಗಿ ಪರಿಣಮಿಸಿದೆ. ಧಾಮದಲ್ಲಿರುವ ಮೂರು ಹೊಂಡಗಳು ತುಂಬಿಕೊಂಡರೆ, ಪಟ್ಟಣದ ಕೊಳವೆ ಬಾವಿಗಳು ಪುನಶ್ಚೇತನಗೊಳ್ಳಲಿವೆ. ಹೀಗಾಗಿ ಈ ಯೋಜನೆ ಅಡಿ ಶಾಶ್ವತವಾಗಿ ನೀರು ಹರಿಯಬೇಕು’ ಎಂಬುದು ಸ್ಥಳೀಯರ ಆಶಯ.
ಮಳೆ ಇಲ್ಲದ ಪರಿಣಾಮ ನೀರಿಗಾಗಿ ನವಿಲುಗಳು ರೈತರ ನೀರಾವರಿ ಜಮೀನು ಗಳಿಗೆ ನುಗ್ಗುತ್ತಿದ್ದವು. ಕೆಲವು ಬಾರಿ ದುಷ್ಕರ್ಮಿಗಳ ಕೈಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದವು. ಈ ಸಮಸ್ಯೆ ಆಲಿಸಿದ್ದ ಶಾಸಕ ಬಸವರಾಜ ಬೊಮ್ಮಾಯಿ, ನೀರು ಹರಿಸಲು ಕ್ರಮಕೈಗೊಂಡಿದ್ದರು.