ಕಡೂರು: ತಾಲ್ಲೂಕಿನ ಎಸ್.ಮಾದಾ ಪುರ ಗ್ರಾಮದ ಹರಿಜನ ಕಾಲೋನಿಯ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಗ್ರಾಮದ ತಿರುಮಲಪ್ಪ (55) ಹಲ್ಲೆಗೊಳಗಾದ ವ್ಯಕ್ತಿ. ಶುಕ್ರವಾರ ರಾತ್ರಿ ಅನಾರೋಗ್ಯದ ಕಾರಣ ತಿರುಮಲಪ್ಪ ತನ್ನ ಪತ್ನಿ ರೇಣುಕಮ್ಮನ ಜತೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುತ್ತಿದ್ದಾಗ, ಅದೇ ಗ್ರಾಮದ ಬಸವರಾಜ ಎಂಬುವವರು ಏಕಾಏಕಿ ಹಲ್ಲೆ ನಡೆಸಿ, ಜನಾಂಗಿಯ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ತಲೆಗೆ ಬಲವಾದ ಪೆಟ್ಟು ಬಿದ್ದ ತಿರು ಮಲಪ್ಪ ಅವರನ್ನು ರಕ್ಷಿಸಲು ಹೋದ ರೇಣುಕಮ್ಮ ಅವರ ಮೇಲೂ ಹಲ್ಲೆ ನಡೆದಿದೆ ಎಂದೂ ದೂರಲಾಗಿದೆ. ತಿರು ಮಲಪ್ಪ ಅವರನ್ನು ಕಡೂರು ಸಾರ್ವ ಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ತಿರುಮಲಪ್ಪ ಅವ ರನ್ನು ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
‘ತಿರುಮಲಪ್ಪ ಅವರ ತಲೆಗೆ ಬಲ ವಾಗಿ ಏಟು ಬಿದ್ದಿದೆ. ಇನ್ನೂ ಪ್ರಜ್ಞೆ ಬಾರದ ಕಾರಣದಿಂದ ವಿವಿಧ ಪರೀಕ್ಷೆ ನಡೆಸಿದ ನಂತರವೇ ಅವರ ಆರೋಗ್ಯದ ಬಗ್ಗೆ ತಿಳಿಸಲು ಸಾಧ್ಯ’ ಎಂದು ಸಾರ್ವ ಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಉಮೇಶ್ ಹೇಳಿದ್ದಾರೆ.
ಹಲ್ಲೆಗೆ ಜನಾಂಗಿಯ ದ್ವೇಷವೇ ಕಾರಣ ಎಂದು ರೇಣುಕಮ್ಮ ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಾಮಸ್ವಾಮಿ, ಗಣೇಶ್, ಸಗನಪ್ಪ, ಶ್ರೀನಿವಾಸ್, ಪ್ರಶಾಂತ್, ತಿಮ್ಮಯ್ಯ, ಚೌಡಪ್ಪ ಆಸ್ಪತ್ರೆಗೆ ಭೇಟಿ ನೀಡಿದ್ದರು.
**
ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ
ದಲಿತರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಶೂದ್ರ ಶ್ರೀನಿವಾಸ್ ಆಗ್ರಹಿಸಿದರು.ಹಲ್ಲೆಗೊಳಗಾಗಿ ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುವ ತಿರುಮಲಪ್ಪ ಅವರನ್ನು ಭೇಟಿಯಾಗಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಎಸ್. ಮಾದಾಪುರ ಗ್ರಾಮದಲ್ಲಿ ಈ ಹಿಂದೆಯೂ ಹಲವು ಬಾರಿ ದಲಿತರ ಮೇಲೆ ಹಲ್ಲೆ ನಡೆದಿದ್ದು, ಶುಕ್ರವಾರ ಮತ್ತೆ ಮರುಕಳಿಸಲು ಪೊಲೀಸ್ ಇಲಾಖೆ ನಿರ್ಲಕ್ಷ್ಯತನ ಕಾರಣವಾಗಿದೆ ಎಂದು ದೂರಿದರು.