ನರಸಿಂಹರಾಜಪುರ: ‘ಪರಿಶಿಷ್ಟ ಜಾತಿಯ ಬಡ, ಕೂಲಿ ಕಾರ್ಮಿಕರು ಫಾರಂ ನಂ. 50,53 ಹಾಗೂ 94(ಸಿ)ಯಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಕ್ಷೇತ್ರದ ಶಾಸಕರು ಹಕ್ಕುಪತ್ರ ನೀಡಿಲ್ಲ. ಆದರೆ, ಬಿಜೆಪಿ ಕಾರ್ಯಕರ್ತರಿಗೆ, ತಮ್ಮ ಹಿಂಬಾಲಕರಿಗೆ, ಭೂಮಿ ಇರುವವರಿಗೆ ಹಕ್ಕುಪತ್ರ ನೀಡುವುದರ ಮೂಲಕ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿಯ ಜಿಲ್ಲಾ ಉಪಾಧ್ಯಕ್ಷ ಎಚ್.ಎಂ.ಶಿವಣ್ಣ ಆರೋಪಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಭವನದ ನಿರ್ಮಾಣಕ್ಕೆ ಮೀಸಲಿಟ್ಟ ಅನುದಾನ ವನ್ನು ದೇವಾಲಯದ ನಿರ್ಮಾಣಕ್ಕೆ ಬಳಸಲಾಗಿದ್ದು ಇದಕ್ಕೆ ಶಾಸಕರು ಉತ್ತರಿಸಬೇಕು ಎಂದು ಆಗ್ರಹಿಸಿದರು.
ಕ್ಷೇತ್ರದ ವ್ಯಾಪ್ತಿ ಯಲ್ಲಿ ದಲಿತರ ಮೇಲಿನ ಹಲ್ಲೆ ಪ್ರಕರಣಗಳು ನಿರಂತರವಾಗಿ ಮುಂದುವರಿದಿವೆ. ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಲು ಕೊಪ್ಪ ಗ್ರಾಮದ ರಂಗಪ್ಪ ಎಂಬ ದಲಿತನ ಮೇಲೆ ಗ್ರಾಮ ಪಂಚಾಯಿತಿ ಸದಸ್ಯ ನೊಬ್ಬ ಚಪ್ಪಲಿಯಿಂದ ಹಲ್ಲೆ ಮಾಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಆ ಸದಸ್ಯನ ಸದಸ್ಯತ್ವವನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
‘ದಲಿತರ ಮನೆಯಲ್ಲಿ ಔಪಚಾರಿಕವಾಗಿ ಆಹಾರ ಸೇವಿಸಿ ದಲಿತರು ಹಿಂದೂಗಳೆಲ್ಲ ಒಂದೇ ಎಂದು ಹೇಳುವ ಬಿಜೆಪಿಯವರು ತಮ್ಮದೇ ಪಕ್ಷದ ಚುನಾಯಿತ ಜನಪ್ರತಿನಿಧಿಯೊಬ್ಬ ದಲಿತರ ಮೇಲೆ ಹಲ್ಲೆ ನಡೆಸಿರುವುದರ ಬಗ್ಗೆ ಉತ್ತರಿಸಬೇಕು’ ಎಂದರು.
ಸಮಾಜಕಲ್ಯಾಣ ಇಲಾಖೆಯು ಸೇರಿದಂತೆ ಇತರೆ ಇಲಾಖೆಗಳಲ್ಲಿ ಡಿ ದರ್ಜೆ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವ ದಲಿತರನ್ನು ಕಾಯಂ ಗೊಳಿಸಬೇಕು, ಸಮಾಜ ಕಲ್ಯಾಣ ಸಚಿವರು ಪರಿಶಿಷ್ಟ ಜಾತಿಯ ಪೌರ ಕಾರ್ಮಿಕ ರಾಗಿ ಸೇವೆ ಸಲ್ಲಿಸುತ್ತಿರುವ ಮಾದಿಗ ಜನಾಂಗದ 10 ಸಾವಿರ ನೌಕರರ ಸೇವೆ ಕಾಯಂಗೊಳಿಸುವುದಾಗಿ ಹೇಳಿಕೆ ನೀಡಿದ್ದಾರೆ. ಇದೇ ರೀತಿ ಇತರೆ ಪರಿಶಿಷ್ಟ ಜಾತಿಯವರ ಸೇವೆಯನ್ನು ಕಾಯಂ ಗೊಳಿಸಲಿ. ಪರಿಶಿಷ್ಟ ಜಾತಿ, ಪಂಗಡ ದವರು ವಾಸಿಸುವ ಬಡಾವಣೆಗಳ ಸಮೀಪ ತೆರೆದಿರುವ ಮದ್ಯದ ಅಂಗಡಿ ಗಳನ್ನು ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿದರು.
ಜಿಲ್ಲಾ ಸಮಿತಿಯ ಸದಸ್ಯ ಚಿತ್ರಪ್ಪ ಯರಬಾಳ್ ಮಾತನಾಡಿ, ‘ಶಾಸಕರು 2008ರಿಂದ 2016ರ ವರೆಗೆ ಒಂದೂ ಹಕ್ಕುಪತ್ರ ನೀಡಿಲ್ಲ. ಇವರು ದಲಿತರ ಬಗ್ಗೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ’ ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಬನ್ನೂರು ರಘು, ನಾಗಪ್ಪ, ಬಾಬು ಇದ್ದರು.
**
ಬಿಜೆಪಿಯವರು ವೋಟ್ಬ್ಯಾಂಕ್ ರಾಜಕಾರಣಕ್ಕೆ ದಲಿತರ ಮನೆಗೆ ಭೇಟಿ ನೀಡುವುದರ ಬದಲು, ದಲಿತರಿಗೆ ಹೆಚ್ಚು ಹಕ್ಕುಪತ್ರ ನೀಡುವ ಕೆಲಸ ಮಾಡಬೇಕು.
–ಎಂ.ಮಹೇಶ್,
ರಾಜ್ಯ ದಲಿತ ಸಂಘರ್ಷ ಸಮಿತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.