ಮಹಾಲಿಂಗಪುರ: ‘15 ವರ್ಷಗಳಿಂದ ಕೆರೆ ಹೂಳು ತುಂಬಿಕೊಂಡು ಪಟ್ಟಣದ ಅಂತರ್ಜಲ ಕಡಿಮೆಯಾಗಿತ್ತು. ಇತ್ತೀಚೆಗೆ ಸಚಿವೆ ಉಮಾಶ್ರೀ ಕೆರೆಯ ಹೂಳೆತ್ತುವ, ಅಭಿವೃದ್ಧಿ ಪಡಿಸುವ ಹಾಗೂ ಪಟ್ಟಣದಲ್ಲೊಂದು ವಿಹಾರ ಧಾಮ ನಿರ್ಮಾಣ ಮಾಡಲು ₹1ಕೋಟಿ ಅನುದಾನವನ್ನು ಮಂಜೂರು ಮಾಡಿಸಿದ್ದು ಕೆರೆಯ ಕಾಯಕಲ್ಪದ ಕಾರ್ಯ ಭರದಿಂದ ಸಾಗಿದೆ’ ಎಂದು ಪುರಸಭೆ ಅಧ್ಯಕ್ಷ ಬಸವರಾಜ ರಾಯರ ತಿಳಿಸಿದರು. ಪಟ್ಟಣದ ಸಿದ್ಧ ಸರೋವರ ಕಾಮಗಾರಿಯ ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
‘ಪುರಸಭೆಯ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ಕೆರೆಯನ್ನು ಅಭಿವೃದ್ಧಿಪಡಿಸುವ ಹಾಗೂ ಸ್ವಚ್ಛಗೊಳಿಸುವ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದೇನೆ. ಒಂದು ಒಳ್ಳೆಯ ಕೆಲಸವಾಗಬೇಕಾದರೆ ಸ್ವಲ್ಪ ತೊಂದರೆಯಾಗುವುದು ಸಹಜ. ಆದರೆ ಈ ಕಾಮಗಾರಿ ಮುಗಿಯುವವರೆಗೆ ಸಾರ್ವಜನಿಕರು ಸಹಕರಿಸಿದರೆ ಮುಂದಿನ 20 ವರ್ಷಗಳವರೆಗೆ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ. ಕೆರೆಯ ಆಳವನ್ನು 5ರಿಂದ 10ಅಡಿಗಳ ಆಳದವರೆಗೆ ಹೂಳೆತ್ತಿಸುವ ಕಾರ್ಯಕ್ಕೆ ಕೈ ಹಾಕಿದ್ದೇನೆ. ಅದರೊಂದಿಗೆ ಕೆರೆಯ ಸುತ್ತಲೂ ಫುಟ್ಪಾತ್ ನಿರ್ಮಿಸಿ ವಿಹಾರ ತಾಣವನ್ನಾಗಿಸುವ ಕನಸು ಹೊಂದಿದ್ದೇನೆ’ ಎಂದು ಕೆರೆಯ ವೀಕ್ಷಣಾ ಸಂದರ್ಭದಲ್ಲಿ ಹೇಳಿದರು.
ಪುರಸಭೆ ಸದಸ್ಯ ಜಾವೇದ ಭಾಗವಾನ ಮಾತನಾಡಿ ‘ಕೆರೆಯ ಅಭಿವೃದ್ದಿ ಕಾಮಗಾರಿ ಪ್ರಾರಂಭಿಸಲಾಗಿದೆ. ಕೆರೆಯ ಆಳ ಹೆಚ್ಚಿಸುವ ಉದ್ದೇಶದಿಂದ ಗರಸನ್ನು ತೆಗೆಸಲಾಗುವುದು. ಸಾರ್ವಜನಿಕರು ಇಲ್ಲಿನ ಗರಸನ್ನು ಎಷ್ಟು ಬೇಕಾದರು ತಮ್ಮ ವೆಚ್ಚದಲ್ಲಿ ಉಚಿತವಾಗಿ ತೆಗೆದುಕೊಂಡು ಹೋಗಲು ಅನುವು ಮಾಡಿದೆ’ ಎಂದರು.
ಪುರಸಭೆ ಸದಸ್ಯ ಯಲ್ಲನಗೌಡ ಪಾಟೀಲ ಮಾತನಾಡಿ ‘ಕೆರೆಯ ಅಭಿವೃದ್ದಿ ಕಾಮಗಾರಿ ನಡೆದಿರುವುದರಿಂದ ಪಟ್ಟಣದಲ್ಲಿ ಸ್ವಲ್ಪ ಮಟ್ಟಿನ ನೀರಿನ ಸಮಸ್ಯೆ ತಲೆದೋರಬಹುದು, ಜನರು ನೀರಿನ ಸಮಸ್ಯೆ ತಿಳಿಸಿದರೆ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುವುದು’ ಎಂದರು.
ಪುರಸಭೆ ಸದಸ್ಯರಾದ ಸಂಗಪ್ಪ ಹಲ್ಲಿ, ಹೊಳೆಪ್ಪ ಬಾಡಗಿ, ಆನಂದ ಬಕರೆ, ರವಿ ಬಿದರಿ, ದಾದಾಪೀರ ಕರೋಶಿ ಹಾಗೂ ಮಲ್ಲಪ್ಪ ಸಿಂಗಾಡಿ, ವಿಜುಗೌಡ ಪಾಟೀಲ,ಅನೀಲ ಜೋಶಿ, ಸಿದ್ದು ಬೆನ್ನೂರ, ಕೃಷ್ಣಗೌಡ ಪಾಟೀಲ, ಅರ್ಜುನ ದೊಡಮನಿ, ಲಕ್ಷ್ಮಣ ಮಾಂಗ, ರವಿ ಹಲಸಪ್ಪಗೋಳ ಇವರೆಲ್ಲರ ಪ್ರಯತ್ನದಿಂದಾಗಿ ಸಿದ್ಧ ಸರೋವರಕ್ಕೆ ಕಾಯಕಲ್ಪ ಭಾಗ್ಯ ಒದಗಿ ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.