ಭದ್ರಾವತಿ: ಸ್ವಯಂ ನಿವೃತ್ತಿ ಯೋಜನೆಗಾಗಿ ಸರ್ಕಾರ ಮುಂದಿಟ್ಟ ₹ 400 ಕೋಟಿ ಪ್ರಸ್ತಾವಕ್ಕೆ ಎಂ.ಪಿ.ಎಂ ಕಾರ್ಮಿಕ ಸಂಘ ಸೋಮವಾರ ನಡೆಸಿದ ಅಭಿಪ್ರಾಯ ಸಂಗ್ರಹದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ.
‘ಕಾಯಂ ಕಾರ್ಮಿಕರು ಇದರಲ್ಲಿ ಪಾಲ್ಗೊಂಡಿದ್ದರು. ಒಟ್ಟು 930 ಮತದಾರರ ಪೈಕಿ 679 ಮಂದಿ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ಇದರಲ್ಲಿ 538 ಮಂದಿ ಸರ್ಕಾರದ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದ್ದರೆ, 138 ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ’ ಎಂದು ಕಾರ್ಮಿಕ ಸಂಘದ ಅಧ್ಯಕ್ಷ ಸಿ.ಎಸ್.ಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಾರ್ಮಿಕರ ಅಭಿಪ್ರಾಯವನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿಕೊಡುವ ಮೂಲಕ ಸ್ವಯಂ ನಿವೃತ್ತಿ ಯೋಜನೆಗೆ ಅಗತ್ಯ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೋರಲಾಗುವುದು’ ಎಂದು ಹೇಳಿದರು.
ಅಭಿಪ್ರಾಯ ಸಂಗ್ರಹ ನಿರ್ಧಾರವು ಕಾಯಂ ಕಾರ್ಮಿಕರ ಸಂಘಕ್ಕೆ ಸೀಮಿತವಾಗಿದ್ದು, ಕಾರ್ಖಾನೆಯಲ್ಲಿರುವ 1,300 ಗುತ್ತಿಗೆ ಕಾರ್ಮಿಕರು ಮತದಾನದಲ್ಲಿ ಪಾಲ್ಗೊಂಡಿಲ್ಲ. ಗುತ್ತಿಗೆ ಕಾರ್ಮಿಕರಿಗೆ ಸರ್ಕಾರ ₹ 56.47 ಕೋಟಿ ಪ್ರಸ್ತಾವ ಇಟ್ಟಿದೆ.