ಹುಬ್ಬಳ್ಳಿ: ಪರಿಸರದ ಬಗ್ಗೆ ಜಾಗೃತಿ ಮೂಡಿಸಿ, ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಜುಲೈ 20ರಂದು ‘ಬಸ್ ದಿನ’ ಆಚರಿಸಲು ನಿರ್ಧರಿಸಿದೆ.
‘ಬಸ್ ದಿನದಂದು ಎಲ್ಲಾ ಜನಪ್ರತಿನಿಧಿಗಳು, ಸಾರಿಗೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಸರ್ಕಾರಿ ನೌಕರರು, ಸಾರ್ವಜನಿಕರು ಬಸ್ನಲ್ಲಿಯೇ ಸಂಚರಿಸಲಿದ್ದಾರೆ. ಅಂದು 50 ಹೆಚ್ಚುವರಿ ಬಸ್ಗಳು ಸಂಚರಿಸಲಿವೆ’ ಎಂದು ಸಾರಿಗೆ ಸಂಸ್ಥೆಯ ಅಧ್ಯಕ್ಷ ಸದಾನಂದ ಡಂಗನವರ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಪ್ರಾಯೋಗಿಕವಾಗಿ ಮೊದಲು ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಮೊದಲ ಸಲ ಬಸ್ ದಿನ ಆಚರಿಸಲಾಗುತ್ತದೆ. ಈ ಕುರಿತು ಎಲ್ಲರಿಗೂ ಮಾಹಿತಿ ತಲುಪಿಸಿದ್ದೇವೆ. ಕರಪತ್ರ ಹಂಚಿ ಜಾಗೃತಿ ಮೂಡಿಸುತ್ತಿದ್ದೇವೆ. ಇನ್ನು ಮುಂದೆ ಪ್ರತಿ ತಿಂಗಳು 20ರಂದು ಬಸ್ ದಿನ ನಡೆಯಲಿದೆ. ನಮ್ಮ ಪ್ರಯತ್ನಕ್ಕೆ ಸಾರ್ವಜನಿಕರ ಸಹಕಾರ ಕೂಡ ಅಗತ್ಯ’ ಎಂದು ಅವರು ಹೇಳಿದರು.
‘ಹುಬ್ಬಳ್ಳಿ–ಧಾರವಾಡ ನಗರಗಳಲ್ಲಿ ನಿತ್ಯ 2 ಲಕ್ಷ ಜನ ಬಸ್ ಬಳಕೆ ಮಾಡುತ್ತಾರೆ. ಬಸ್ ದಿನದಂದು ಈ ಸಂಖ್ಯೆ ದುಪ್ಪಟ್ಟಾಗುವ ನಿರೀಕ್ಷೆಯಿದೆ. ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಬಸ್ ಮಾರ್ಗ ನಿರ್ಧರಿಸುತ್ತೇವೆ. ಶ್ರಾವಣ ಮಾಸ ಹತ್ತಿರುವಿರುವ ಕಾರಣ ಮುಂದಿನ ದಿನಗಳಲ್ಲಿ ವಿವಿಧ ಬಡಾವಣೆಗಳಿಂದ ಮೂರುಸಾವಿರ ಮಠಕ್ಕೆ ಸಂಪರ್ಕ ಕಲ್ಪಿಸುವ ‘ಶ್ರಾವಣ ಎಕ್ಸ್ಪ್ರೆಸ್’ ಬಸ್ ಸಂಚಾರ ಆರಂಭಿಸುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.