ತರೀಕೆರೆ: ಸರ್ಕಾರದ ವಿರುದ್ಧದ ಭೂಕಬಳಿಕೆ, ಪರಿಹಾರ ಪ್ರಕರಣಗಳನ್ನು ಬೇರೆಡೆಗೆ ವರ್ಗಾಯಿಸಿರುವ ಸರ್ಕಾರದ ಕ್ರಮ ಖಂಡಿಸಿ ಪಟ್ಟಣದ ವಕೀಲರ ಸಂಘ ಮಂಗಳವಾರ ಪ್ರತಿಭಟನೆ ನಡೆಸಿತು.
‘ಸರ್ಕಾರದ ವಿರುದ್ಧದ ಭೂ ಒತ್ತುವರಿ ಪ್ರಕರಣಗಳನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಮತ್ತು ಸರ್ಕಾರಿ ಯೋಜನೆಗಳಿಗೆ ತಮ್ಮ ಭೂಮಿಗಳನ್ನು ಕಳೆದುಕೊಂಡ ಸಂತ್ರಸ್ತರು ಪರಿಹಾರದ ಹಣ ಪಡೆಯಲು ಚಿಕ್ಕಮಗಳೂರಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದು, ಇದು ಕಕ್ಷಿದಾರರಿಗೆ ಅತ್ಯಂತ ಸಮಸ್ಯೆಯಾಗುತ್ತದೆ.
ಆದ್ದರಿಂದ ಇಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ನ್ಯಾಯಾಲಯದ ಕಲಾಪಗಳಿಂದ ದೂರ ಉಳಿಯುತ್ತಿದ್ದೇವೆ’ ಎಂದು ವಕೀಲ ಟಿ.ಎಲ್.ಪ್ರಕಾಶ್ ಹೇಳಿದರು.ಹಿರಿಯ ವಕೀಲ ಕೆ.ಲಿಂಗರಾಜು ಮಾತನಾಡಿ, ‘ತಾಲ್ಲೂಕಿನ ರೈತರು ತಮ್ಮ ಜಮೀನುಗಳನ್ನು ಕಳೆದುಕೊಂಡಿರುವು ದಲ್ಲದೆ ಅದರ ಪರಿಹಾರವನ್ನು ಪಡೆಯಲು ದೂರದ ಊರುಗಳಿಗೆ ಹೋಗಿ ಪ್ರಕರಣ ನಡೆಸಿ ಪರಿಹಾರ ಪಡೆಯುವಂತಾಗಿರುವುದು ದುರ್ದೈವದ ಸಂಗತಿ’ ಎಂದು ಹೇಳಿದರು.
ವಕೀಲ ಎಸ್.ಎನ್.ಮಲ್ಲೇಗೌಡ ಮಾತನಾಡಿ, ‘ಈಗಾಗಲೇ ಬರದಿಂದ ತತ್ತರಿಸುತ್ತಿರುವ ರೈತರು ಈಗ ಕಳೆದುಕೊಂಡ ಜಮೀನಿನ ಪರಿಹಾರ ಪಡೆಯಲು ದೂರದ ಊರುಗಳಿಗೆ ಹೋಗುವಂತಾಗಿರುವುದು ಸರಿಯಾದ ಕ್ರಮವಲ. ಒಟ್ಟು 400ಕ್ಕೂ ಹೆಚ್ಚು ಪ್ರಕರಣಗಳು ವರ್ಗಾವಣೆಗೊಳ್ಳಲಿದ್ದು ಇದರಿಂದ ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕುತ್ತಾರೆ’ ಎಂದರು.
ವಕೀಲರಾದ ಜಿ.ಎನ್. ಚಂದ್ರಶೇಖರ್, ಟಿ.ಕೆ.ನಂದೀಶ್ವರಯ್ಯ, ಎಂ.ಕೆ. ತೇಜಮೂರ್ತಿ, ಬಿ.ಪಿ. ರಾಜಶೇಖರ ದೋರನಾಳು ಸುರೇಶ್ ಮಾತನಾಡಿದರು. ಸಂಘದ ಅಧ್ಯಕ್ಷ ಇ.ಪಿ.ಪ್ರಕಾಶ್, ಉಪಾಧ್ಯಕ್ಷ ಕಿರಣ್ಕುಮಾರ್, ಬಿ.ಎನ್. ಕಾರ್ಯದರ್ಶಿ ಆನಂದ್ ಇದ್ದರು.