ವಿಜಯಪುರ: ‘ರಾಜ್ಯದಿಂದ ಹಜ್ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ಅತ್ಯುತ್ತಮವಾದ ಸೇವಾ ಸೌಲಭ್ಯವನ್ನು ರಾಜ್ಯ ಸರ್ಕಾರ ಕಲ್ಪಿಸುತ್ತಿದೆ’ ಎಂದು ಹಜ್ ಖಾತೆ ಸಚಿವ ಆರ್.ರೋಶನ್ ಬೇಗ್ ಹೇಳಿದರು.
ರಾಜ್ಯ ಹಜ್ ಸಮಿತಿ ವತಿಯಿಂದ ಜಿಲ್ಲೆಯ ಹಜ್ ಯಾತ್ರಾರ್ಥಿಗಳಿಗೆ ನಗರದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ತರಬೇತಿ ಶಿಬಿರ, ಚುಚ್ಚುಮದ್ದು ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದ ಅವರು ಮಾತ ನಾಡಿ, ಇದರ ಪ್ರಯೋಜನ ಪಡೆದು ಕೊಳ್ಳಿ ಎಂದು ಸಲಹೆ ನೀಡಿದರು.
‘ರಾಜ್ಯ ಹಜ್ ಸಮಿತಿ ವತಿಯಿಂದ ಹಜ್ ಯಾತ್ರೆ ಸುರಕ್ಷಿತ, ಸುಗಮವಾಗಲು ಅನುಕೂಲವಾಗುವಂತೆ ತರಬೇತಿ ಆಯೋಜಿಸಲಾಗುತ್ತಿದೆ. ಯಾತ್ರೆಗೆ ತೆರಳುವ ಸಂದರ್ಭದಲ್ಲಿ ಅವಶ್ಯಕತೆ ಯಿರುವ ವಸತಿ, ವಿಮಾನಯಾನ ಸೌಲಭ್ಯ ಸೇರಿದಂತೆ ಇನ್ನುಳಿದ ಸಕಲ ಸೌಲಭ್ಯ ಗಳನ್ನು ವಿಶ್ವದಲ್ಲಿ ಎಲ್ಲೂ ನೀಡದಂತಹ ವ್ಯವಸ್ಥೆಯನ್ನು ಬೆಂಗಳೂರು ಹಜ್ ಸಮಿತಿ ಮೂಲಕ ರಾಜ್ಯ ಸರ್ಕಾರ ಕಲ್ಪಿಸಿದೆ’ ಎಂದು ಹೇಳಿದರು.
‘ರಾಜ್ಯದ ವಿವಿಧ ಭಾಗಗಳಿಂದ ಹಜ್ ಯಾತ್ರಾರ್ಥಿಗಳು ಪವಿತ್ರ ಮಕ್ಕಾಗೆ ತೆರಳಿದ ಸಂದರ್ಭ ಇರಬೇಕಾದ ಮಾಹಿತಿ ಕುರಿತು ವಿವರವನ್ನು ಈ ತರಬೇತಿಯಲ್ಲಿ ನೀಡಲಾಗುತ್ತಿದ್ದು, ಮುಂದೆ ಆಗಬಹುದಾದ ಸಮಸ್ಯೆ, ಇತರೆ ತೊಡಕುಗಳ ಬಗ್ಗೆ ತಿಳಿದು, ಸುರಕ್ಷಿತವಾಗಿ ಯಾತ್ರೆ ಕೈಗೊಳ್ಳುವಂತೆ’ ಕಿವಿಮಾತು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮಾತನಾಡಿ ‘ಹಜ್ ಯಾತ್ರೆ ಅತ್ಯಂತ ಪವಿತ್ರ. ಹಿಂದೂ ಸಮಾಜದಲ್ಲಿಯೂ ಕೂಡ ಕಾಶಿ, ಶ್ರೀಶೈಲ ಪುಣ್ಯ ಕ್ಷೇತ್ರಗಳಿಗೆ ಯಾತ್ರೆ ಕೈಗೊಳ್ಳುತ್ತಾರೆ. ಪವಿತ್ರ ಹಜ್ಗೆ ತೆರಳಿದ ಸಂದರ್ಭ ದೇಶ, ರಾಜ್ಯದ ಶ್ರೇಯೋಭಿವೃದ್ಧಿಗಾಗಿ, ಮಳೆಗಾಗಿ ಪ್ರಾರ್ಥಿಸಿ’ ಎಂದು ಯಾತ್ರಿಕರಲ್ಲಿ ಮನವಿ ಮಾಡಿದರು.
‘ಜಿಲ್ಲೆ ಜಾತ್ಯತೀತ, ಸಮಾನತೆಗೆ ಹೆಸರುವಾಸಿ. ಪರ್ಷಿಯನ್ ಭಾಷೆಯಲ್ಲಿದ್ದ ಆದಿಲ್ಶಾಹಿ ಅರಸರ ಕಾಲದ ಐತಿಹಾಸಿಕ ಪುಸ್ತಕಗಳನ್ನು 21 ಸಂಪುಟಗಳಲ್ಲಿ ಉರ್ದು, ಇಂಗ್ಲಿಷ್ ಭಾಷೆಗೆ ತರ್ಜುಮೆಗೊಳಿಸಿ ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ಬಿಡುಗಡೆಗೊಳಿಸುವ ಉದ್ದೇಶ ಹೊಂದಲಾಗಿದೆ’ ಎಂದು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ, ಸಂಸದೀಯ ಕಾರ್ಯದರ್ಶಿ, ನಗರ ಶಾಸಕ ಡಾ.ಮಕ್ಬೂಲ್ ಬಾಗವಾನ ‘ದೇಶದ ಅಭಿವೃದ್ಧಿ, ಐಕ್ಯತೆ, ಉತ್ತಮ ಮಳೆ-–ಬೆಳೆಗಾಗಿ’ ಪ್ರಾರ್ಥಿಸುವಂತೆ ಹಜ್ ಯಾತ್ರಾರ್ಥಿಗಳಲ್ಲಿ ಮನವಿ ಮಾಡಿದರು.
ಮೌಲಾನಾ ಸೈಯ್ಯದ್ ಮೊಹ್ಮದ್ ತನ್ವೀರ ಪೀರಾ ಹಾಶ್ಮಿ ಮಾತನಾಡಿದರು. ಮೇಯರ್ ಅನೀಸ್ ಫಾತಿಮಾ ಬಕ್ಷಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆಜಾದ್ ಪಟೇಲ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ, ಡಿಎಚ್ಓ ರಾಜಕುಮಾರ ಯರಗಲ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಹೇಂದ್ರ ಕಾಪ್ಸೆ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.