ಬಳ್ಳಾರಿ: ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್ಕೆ ಆರ್ಡಿಬಿ)ಯಿಂದ ಆರು ಜಿಲ್ಲೆಗಳಲ್ಲಿ ಕೈಗೊಂಡಿರುವ ಕಾಮಗಾರಿಗಳ ವೇಗ ಹೆಚ್ಚಿಸುವ ಸಲುವಾಗಿ ಪ್ರತಿ ಜಿಲ್ಲೆಯಲ್ಲಿ ಎಚ್ಕೆಆರ್ಡಿಬಿ ಕೋಶವನ್ನು ರಚಿಸುವ ಮಂಡಳಿಯ ಉದ್ದೇಶಕ್ಕೆ ಜಿಲ್ಲೆಯಲ್ಲಿ ಹಿನ್ನಡೆ ಉಂಟಾಗಿದೆ.
ಕೋಶದಲ್ಲಿ ಕೆಲಸ ನಿರ್ವಹಿಸಲು ನಿವೃತ್ತ ಅಧಿಕಾರಿ ಮತ್ತು ಸಿಬ್ಬಂದಿ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಡಳಿತವು ಒಂದು ತಿಂಗಳ ಹಿಂದೆ ಪ್ರಕಟಣೆ ನೀಡಿತ್ತು. ಆದರೆ ಇದುವರೆಗೂ ಒಂದೇ ಒಂದು ಅರ್ಜಿಯೂ ಸಲ್ಲಿಕೆಯಾಗಿಲ್ಲ. ಹೀಗಾಗಿ ಕೋಶ ರಚಿಸುವ ಉದ್ದೇಶ ಸದ್ಯಕ್ಕೆ ಈಡೇರುವ ಲಕ್ಷಣಗಳಿಲ್ಲ.
ಈ ನಡುವೆ ಜಿಲ್ಲಾಡಳಿತ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಕುರಿತು ಪ್ರಕಟಣೆಯನ್ನು ನೀಡಿದೆ. ಐವರನ್ನು ಒಳಗೊಂಡ ಕೋಶ ರಚಿಸುವುದು ಮಂಡಳಿಯ ಉದ್ದೇಶ. ಈ ಕೋಶದಲ್ಲಿ ತಾಂತ್ರಿಕ ಎಂಜಿನಿಯರ್, ಕಿರಿಯ ಎಂಜಿನಿಯರ್ ಮತ್ತು ತಾಂತ್ರಿಕ ಸಲಹೆಗಾರರು. ಡಾಟಾ ಎಂಟ್ರಿ ಆಪರೇಟರ್ಗಳು ಇರಲಿದ್ದಾರೆ.
ಹುದ್ದೆಗಳೇನು?: ಕೋಶದಲ್ಲಿ ಪ್ರಮುಖ ಪಾತ್ರ ವಹಿಸುವ ತಾಂತ್ರಿಕ ಸಲಹೆಗಾರರ ಹುದ್ದೆಗೆ ನಿವೃತ್ತ ಮುಖ್ಯ ಎಂಜನಿಯರ್ ಅಥವಾ ಅಧೀಕ್ಷಕ ಎಂಜನಿಯರ್ ಅಥವಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕನಿಷ್ಠ 15 ವರ್ಷಗಳ ಅನುಭವವುಳ್ಳ ಪ್ರಾಧ್ಯಾಪಕರಿಗೆ ಆದ್ಯತೆ ನೀಡುವುದು ಮಂಡಳಿಯ ಉದ್ದೇಶ. ಅವರಿಗೆ ಮಾಸಿಕ ₹40 ಸಾವಿರ ಗೌರವ ಧನ ನಿಗದಿ ಮಾಡಲಾಗಿದೆ. ಆದರೆ ಈ ಅನುಭವ ವುಳ್ಳ ಯಾರೊಬ್ಬರೂ ಅರ್ಜಿ ಸಲ್ಲಿಸಿಲ್ಲ.
ಯೋಜನೆ ಅನುಷ್ಠಾನ ಮತ್ತು ಸಮ ನ್ವಯ ಅಧಿಕಾರಿ ಹುದ್ದೆಗೆ ಉಪನಿರ್ದೇಶ ಕರ ಹುದ್ದೆಗಿಂತ ಮೇಲೆ ಕೆಲಸ ಮಾಡಿದ ನಿವೃತ್ತರಿಗೆ ಆದ್ಯತೆ ನೀಡಲು ನಿರ್ಧರಿ ಸಿದ್ದು, ₹30 ಸಾವಿರ ಮಾಸಿಕ ಗೌರವ ಧನ ನಿಗದಿ ಮಾಡಲಾಗಿದೆ.
ತಾಂತ್ರಿಕ ಅಧಿಕಾರಿ ಹುದ್ದೆಗೆ ನಿವೃತ್ತ ಕಾರ್ಯಪಾಲಕ ಎಂಜನಿಯರ್ ಅಥವಾ ಸಹಾಯಕ ಕಾರ್ಯಪಾಲಕ ಎಂಜಿನಿ ಯರ್ಗಳಿಗೆ ಆದ್ಯತೆ. ಅವರಿಗೆ ಕ್ರಮವಾಗಿ ₹30 ಸಾವಿರ ಮತ್ತು ₹20 ಸಾವಿರ ಗೌರವಧನ ನಿಗದಿ ಮಾಡ ಲಾಗಿದೆ. ಲೆಕ್ಕ ಅಧೀಕ್ಷಕರ ಹುದ್ದೆಗೆ ನಿವೃತ್ತ ಲೆಕ್ಕ ಅಧೀಕ್ಷಕರು ಅರ್ಜಿ ಸಲ್ಲಿಸಬಹುದು.
ಅವರಿಗೆ ₹20 ಸಾವಿರ ಗೌರವಧನವಿದೆ. ಡಾಟಾ ಎಂಟ್ರಿ ಅಪರೇಟರ್ ಹುದ್ದೆಗೆ ಯಾವುದೇ ಪದವಿ, ಕಂಪ್ಯೂಟರ್ ಕೋರ್ಸ್, ಸರ್ಟಿಫಿಕೇಟ್ ಅರ್ಹತೆ ಉಳ್ಳವರು ಅರ್ಜಿ ಸಲ್ಲಿಸಲು ಅರ್ಹರು. ಅವರಿಗೆ ₹10,376 ರೂ. ಗೌರವ ಧನ ನಿಗದಿ ಮಾಡಲಾಗಿದೆ.
ಕಚೇರಿ ಸಿದ್ಧ: ಕೋಶದ ಕಾರ್ಯ ನಿರ್ವಹಣೆಗೆ ಅನುಕೂಲವಾಗಲೆಂದು ಜಿಲ್ಲಾಧಿಕಾರಿ ಕಚೇರಿ ಇರುವ ಕಟ್ಟಡದಲ್ಲಿ ಕಚೇರಿಯನ್ನೂ ಆರಂಭಿಸಲಾಗಿದೆ. ಸದ್ಯಕ್ಕೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಯೇ ಕಾರ್ಯನಿರ್ವಹಿಸುತ್ತಿದ್ದಾರೆ.
ಅರ್ಜಿ ಇಲ್ಲ: ಐದು ಹುದ್ದೆಗಳ ಭರ್ತಿಗಾಗಿ ಜಿಲ್ಲಾಡಳಿತ ನೀಡಿದ್ದ ಪ್ರಕಟಣೆಗೆ ಇದು ವರೆಗೆ ಯಾರೊಬ್ಬರೂ ಅರ್ಜಿ ಸಲ್ಲಿಸಿಲ್ಲ. ಹಾಗೆಂದು ಜಿಲ್ಲಾಡಳಿತ ಸುಮ್ಮನಿರು ವಂತಿಲ್ಲ. ಎರಡನೇ ಬಾರಿ ಪ್ರಕಟಣೆ ನೀಡ ಲಾಗಿದೆ. ಅರ್ಜಿಗಳನ್ನು ನಿರೀಕ್ಷಿಸಲಾಗು ತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ರಾಮ ಪ್ರಸಾದ್ ಮನೋಹರ್ ‘ಪ್ರಜಾವಾಣಿ’ಗೆ ಮಂಗಳವಾರ ತಿಳಿಸಿದರು.
ಮಂಡಳಿಯ ಅನುದಾನದ ಅಡಿ ನಡೆಯುತ್ತಿರುವ ಕಾಮಗಾರಿಗಳ ವೇಗ ಹೆಚ್ಚಿಸುವುದು, ಗುಣಮಟ್ಟದ ಮೇಲೆ ಕಣ್ಗಾವಲು ಇಡುವುದು ಕೋಶ ಪ್ರಮುಖ ಜವಾಬ್ದಾರಿ. ಈ ಜವಾಬ್ದಾರಿ ನಿರ್ವಹಣೆಗೆ ಅರ್ಹರನ್ನು ಅನುಭವ ಮತ್ತು ವಿದ್ಯಾರ್ಹತೆಯ ಆಧಾರದಲ್ಲೇ ನೇಮಕ ಮಾಡಿಕೊಳ್ಳಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.