ಚಾಮರಾಜನಗರ: ಪರಪ್ಪನ ಅಗ್ರಹಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಿಐಜಿ ಡಿ. ರೂಪಾ ಅವರನ್ನು ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಕರ್ತರು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿದರು.
ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ದಕ್ಷ ಅಧಿಕಾರಿ ರೂಪಾ ಅವರು ಬಯಲಿಗೆಳೆದಿದ್ದಾರೆ. ದಿಟ್ಟತನದ ಮತ್ತು ಪ್ರಾಮಾಣಿಕ ಕೆಲಸಕ್ಕಾಗಿ ಅವರಿಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ ಎಂದು ಕಾರ್ಯಕರ್ತರು ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆಲೂರು ಮಲ್ಲು ಮಾತನಾಡಿ, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಾಲ್ಕು ವರ್ಷಗಳಿಂದ ಸರ್ಕಾರ ಕೇವಲ ಭ್ರಷ್ಟಾಚಾರದಲ್ಲಿಯೇ ತೊಡಗಿಕೊಂಡಿದೆ. ಪ್ರಾಮಾಣಿಕ ಅಧಿಕಾರಿಗಳನ್ನು ಪದೇ ಪದೇ ವರ್ಗಾವಣೆ ಮಾಡಲಾಗುತ್ತಿದೆ. ದಕ್ಷತೆಗೆ ಬೆಲೆ ಇಲ್ಲದಂತಾಗಿದೆ’ ಎಂದು ಆರೋಪಿಸಿದರು.
‘ಸರ್ಕಾರದ ನೀತಿಯಿಂದ ಜನಸಾಮಾನ್ಯರು ಕೂಡ ಬೇಸತ್ತಿದ್ದಾರೆ. ರೂಪಾ ಅವರ ವರ್ಗಾವಣೆಯನ್ನು ಕೂಡಲೇ ರದ್ದುಪಡಿಸಬೇಕು. ಇದೇ ರೀತಿ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳ ವರ್ಗಾವಣೆ ಮುಂದುವರಿಸಿದರೆ ರಾಜ್ಯದಾದಂತ್ಯ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜೆಡಿಎಸ್ ರಾಜ್ಯ ಸಮಿತಿ ಸದಸ್ಯ ಸಿ.ಎಂ. ಕೃಷ್ಣಮೂರ್ತಿ, ಜಿಲ್ಲಾ ಘಟಕದ ಉಪಾಧ್ಯಕ್ಷ ಮಹೇಶ್ ಗೌಡ, ಟೌನ್ ಅಧ್ಯಕ್ಷ ಜಿ.ಎಂ. ಶಂಕರ್, ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷ ಪುರ್ಖಾನ್, ಬಸವನಪುರ ಮಂಜು, ದೊರೆಸ್ವಾಮಿ, ಸೈಯದ್ ಇಂದ್ರೀಶ್, ಸಿದ್ದೇಶ್, ನಾಗರಾಜು, ಚಂದ್ರು, ಮಹೇಶ್ ಇದ್ದರು.