ನಮ್ಮ ಹೆಣ್ಣು ಮಕ್ಕಳ ಕರಾಳ ಬದುಕನ್ನು ‘ದಂಧೆಯ ಒಡಲಾಳ’ ಸರಣಿ (ಪ್ರ.ವಾ) ವರದಿ ಬಹಳ ಚೆನ್ನಾಗಿ ಪರಿಚಯಿಸುತ್ತಿದೆ. ಹೆಣ್ಣುಮಕ್ಕಳ ಈ ಸ್ಥಿತಿಗೆ ಕಾರಣಗಳನ್ನು ಹುಡುಕುತ್ತಾ ಹೋದರೆ ನಮ್ಮ ಸಮಾಜ, ಪಾಲಕರು ಅಥವಾ ಗಂಡನೇ ಹೊಣೆಯಾಗಿರುವುದು ಸ್ಪಷ್ಟವಾಗುತ್ತದೆ.
ಹೆಣ್ಣು ಮಕ್ಕಳಿಗೆ ಮದುವೆಯೊಂದೇ ಜೀವನಾಧಾರ ಎಂದು ಪೋಷಕರು ಅವರ ಶಿಕ್ಷಣಕ್ಕೆ ಆದ್ಯತೆ ನೀಡದೆ ಚಿಕ್ಕ ವಯಸ್ಸಿಗೇ ಮದುವೆ ಮಾಡಿ, ತಮ್ಮ ಜವಾಬ್ದಾರಿ ಮುಗಿಯಿತೆಂದು ಸುಮ್ಮನಾಗಿಬಿಡುತ್ತಾರೆ.
ವಾಸ್ತವದಲ್ಲಿ ಹೆಣ್ಣು ಮಕ್ಕಳು ಜೀವನದಲ್ಲಿ ಬರುವ ಎಲ್ಲ ಕಷ್ಟಗಳನ್ನು ಎದುರಿಸಲು ಅಸಮರ್ಥರಾಗಿರುತ್ತಾರೆ. ಶಿಕ್ಷಣವಿಲ್ಲದ ಕಾರಣ ಉದ್ಯೋಗ ಸಿಗದೆ ಕೆಲವರಿಗೆ ಈ ದಾರಿ ಅನಿವಾರ್ಯವಾಗಿರಬಹುದು. ಇನ್ನಾದರೂ ತಂದೆ ತಾಯಂದಿರು ಎಚ್ಚೆತ್ತುಕೊಳ್ಳಬೇಕು. -ಸುಗುಣ, ನೆಲಮಂಗಲ