ಹುಬ್ಬಳ್ಳಿ: ‘ರಾಜ್ಯದಲ್ಲಿ ಉನ್ನತ ಹುದ್ದೆಗಳನ್ನು ಪಡೆಯಬೇಕಾದ ಸಂದರ್ಭದಲ್ಲಿ ನಮ್ಮ ಸಮಾಜದ ಬಾಂಧವರಿಗೆ ಅನೇಕ ಸಲ ಅನ್ಯಾಯವಾಗಿದೆ. ಆಗ ನಮ್ಮವರೇ ಧ್ವನಿ ಎತ್ತುವುದಿಲ್ಲ’ ಎಂದು ಚಿತ್ರದುರ್ಗದ ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಸ್ವಾಮೀಜಿಯ ಪೀಠಾರೋಹಣದ 15ನೇ ವಾರ್ಷಿಕೋತ್ಸವದ ಅಂಗವಾಗಿ ಬುಧವಾರ ನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
‘ರಾಜಕೀಯವಾಗಿ ನಮ್ಮ ಸಮಾಜದವರು ಮುಂದೆ ಬಂದರೆ ಹೆಚ್ಚು ಸ್ಥಾನಮಾನ ಪಡೆಯಲು ಸಾಧ್ಯ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಮಾದಾರ ಸಮಾಜದ ಕನಿಷ್ಠ 15 ಜನರನ್ನು ಶಾಸಕರನ್ನಾಗಿ ಆಯ್ಕೆ ಮಾಡಬೇಕು’ ಎಂದರು.
ಮಾಂಸ ಸೇವನೆಗೆ ವಿರೋಧವಿಲ್ಲ: ವಿಧಾನ ಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪುರ ಮಾತನಾಡಿ ‘ಮಾಂಸಾಹಾರ ಸೇವನೆ ಮಾಡುವವರ ಮೇಲೆ ಹೆಚ್ಚು ದೌರ್ಜನ್ಯ ನಡೆಯುತ್ತಿದೆ. ಜನರ ಆಹಾರ ಸೇವನೆ ಬಗ್ಗೆ ಮಠಾಧೀಶರು ತಮ್ಮ ನಿಲುವು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿ ‘ಮಾಂಸ ಸೇವನೆ ಮಾಡುವುದಕ್ಕೆ ನನ್ನ ವಿರೋಧವಿಲ್ಲ. ಇದರ ಬಗ್ಗೆ ಅವರವರೇ ನಿರ್ಧರಿಸಬೇಕು. ಪ್ರಾಣಿ ಹಿಂಸೆಯನ್ನು ಆದಷ್ಟು ಕಡಿಮೆ ಮಾಡಿ’ ಎಂದರು.
ಪ್ರೊ. ಎಚ್. ಲಿಂಗಪ್ಪ ಅವರು ಸಂಪಾದಿಸಿದ, ಬಸವಮೂರ್ತಿ ಮಾದಾರ ಚನ್ನಯ್ಯ ಅವರ ಕುರಿತಾದ ಲೇಖನಗಳ ಸಂಗ್ರಹ ‘ಮೈತ್ರಿ ಭಾವದ ಬೆಳಕು’ ಗ್ರಂಥವನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.