ಬೆಂಗಳೂರು: ಹೊಸಕೋಟೆಯಲ್ಲಿ ಮಂಗಳವಾರ ₹ 30 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಿರುವ ಮಾದಕ ವಸ್ತು ನಿಯಂತ್ರಣ ದಳದ (ಎನ್ಸಿಬಿ) ಅಧಿಕಾರಿಗಳು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ರಮಣಮ್ಮ (35), ನಾರಾಯಣಸ್ವಾಮಿ (55) ಹಾಗೂ ಶ್ರೀನಿವಾಸ್ (28) ಬಂಧಿತರು. ಆರೋಪಿಗಳು ವಿಜಯವಾಡದಿಂದ ಗಾಂಜಾವನ್ನು ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದರು ಎಂದು ಗೊತ್ತಾಗಿದೆ.
‘ಗಾಂಜಾ ಸಾಗಣೆ ಬಗ್ಗೆ ಮಾಹಿತಿ ಬಂದಿತ್ತು. ಹೊಸಕೋಟೆಗೆ ಹೋಗಿದ್ದ ಅಧಿಕಾರಿಗಳ ತಂಡವು ಆರೋಪಿಗಳನ್ನು ತಪಾಸಣೆಗೆ ಒಳಪಡಿಸಿತ್ತು. ಅವರ ಬಳಿ ಇದ್ದ ಟ್ರಾವೆಲ್ ಬ್ಯಾಗ್ ಒಳಗಿದ್ದ ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ 60 ಕೆ.ಜಿ ಗಾಂಜಾ ಸಿಕ್ಕಿತು’ ಎಂದು ಎನ್ಸಿಬಿ ವಲಯ ನಿರ್ದೇಶಕ ಸುನೀಲ್ಕುಮಾರ್ ಸಿನ್ಹಾ ತಿಳಿಸಿದರು.
‘ಆರೋಪಿಗಳ ವಿರುದ್ಧ ಮಾದಕ ವಸ್ತು ನಿಯಂತ್ರಣ (ಎನ್ಡಿಪಿಎಸ್) ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಇವರು ಈ ಹಿಂದೆಯೂ ಹಲವು ಬಾರಿ ಗಾಂಜಾ ಸಾಗಣೆ ಮಾಡಿದ್ದಾರೆ ಎಂಬ ಮಾಹಿತಿ ಇದ್ದು, ಪರಿಶೀಲನೆ ನಡೆಸುತ್ತಿದ್ದೇವೆ’ ಎಂದರು.