ಬೆಂಗಳೂರು: ನಗರದ ಬಹುತೇಕ ಎಲ್ಲ ಮೆಟ್ರೊ ನಿಲ್ದಾಣಗಳಲ್ಲಿ ಹಿಂದಿ ಫಲಕಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ಮಸಿ ಬಳಿದಿದ್ದಾರೆ.
ಮೆಟ್ರೊದಲ್ಲಿ ಹಿಂದಿ ಭಾಷೆ ಬಳಕೆ ಕುರಿತು ಘೋಷಣೆ ಕೂಗುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮೆಟ್ರೊ ನಿಲ್ದಾಣದಲ್ಲಿನ ಹಿಂದಿ ಫಲಕಗಳಿಗೆ ಕಪ್ಪು ಮಸಿ ಬಳಿದು ಪ್ರತಿಭಟಿಸಿದ್ದಾರೆ.
ಮೈಸೂರು ರಸ್ತೆ, ರಾಜಾಜಿನಗರ, ಪೀಣ್ಯಾ, ಎಂಜಿ ರಸ್ತೆ, ಯಶವಂತಪುರ, ಜಯನಗರ, ಚಿಕ್ಕಪೇಟೆ ಸೇರಿದಂತೆ 40 ಮೆಟ್ರೊ ನಿಲ್ದಾಣಗಳಲ್ಲಿ ಹಿಂದಿ ಫಲಕಗಳಿಗೆ ಮಸಿ ಬಳಿಯಲಾಗಿದೆ.
ಕಾರ್ಯಕರ್ತರ ದಿಢೀರ್ ದಾಳಿಯಿಂದಾಗಿ ಪ್ರಯಾಣಿಕರು ಕೆಲ ಕಾಲ ಗೊಂದಲಕ್ಕೀಡಾದರು. ಪ್ರತಿಭಟನಾ ನಿರತ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ತಡೆದಿರುವುದಾಗಿ ತಿಳಿದು ಬಂದಿದೆ.