ಮಾಲೂರು: ‘ಅಧಿಕಾರಿಗಳು ತಮ್ಮ ಕಚೇರಿಗಳಿಂದ ಹೊರ ಬಂದು ಸರ್ಕಾರದ ಅನುದಾನಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು’ ಎಂದು ಶಾಸಕ ಕೆ.ಎಸ್.ಮಂಜುನಾಥಗೌಡ ತಿಳಿಸಿದರು.
ತಾಲ್ಲೂಕಿನ ದಿನ್ನಹಳ್ಳಿ ಗ್ರಾಮದಲ್ಲಿ ಬುಧವಾರ ರೈತರಿಗೆ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಪಾಲನೆ ಮತ್ತು ಮೀನುಗಾರಿಕೆ ಇಲಾಖೆಗಳಲ್ಲಿ ರೈತರಿಗೆ ಅನುಕೂಲವಾಗುವ ಅನುದಾನ ಮತ್ತು ಕಾರ್ಯಕ್ರಮಗಳು ಇವೆ. ಅಧಿಕಾರಿಗಳು ರೈತರಿಗೆ ಈ ಬಗ್ಗೆ ಮಾಹಿತಿ ನೀಡಬೇಕು’ ಎಂದರು.
‘ತಾಲ್ಲೂಕಿನಲ್ಲಿ ವಿವಿಧ ತಳಿಯ 34 ಸಾವಿರ ಹಸುಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ. ಕೇವಲ 5 ಸಾವಿರ ಹಸುಗಳಿಗೆ ಮಾತ್ರ ವಿಮೆ ಮಾಡಿಸ ಲಾಗಿದೆ. ಇದು ಅಧಿಕಾರಿಗಳು ನಿರ್ಲಕ್ಷ್ಯ ವನ್ನು ತೋರುತ್ತದೆ’ ಎಂದು ದೂರಿದರು.
ವಿಮೆ ಮಾಡಿಸದ ರೈತರ ಪಟ್ಟಿಯನ್ನು ಪಶು ಇಲಾಖೆ ಅಧಿಕಾರಿಗಳು ಸಿದ್ಧಪಡಿಸಿದರೆ ಓಟ್ಟು ವಿಮೆ ಹಣವನ್ನು ನಾನು ಭರಿಸುವೆ’ ಎಂದು ತಿಳಿಸಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಭವ್ಯಾ ರಾಣಿ, ಇಲಾಖೆಯಿಂದ ರೈತರಿಗೆ ದೊರಕುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಬೋರ್ ಮುನಿಯಪ್ಪ, ಅಗ್ರಿ ನಾರಾಯಣಪ್ಪ, ರಾಮಸ್ವಾಮಿರೆಡ್ಡಿ, ಶಾಸಕರ ಆಪ್ತ ಕಾರ್ಯದರ್ಶಿ ಚೌಡರೆಡ್ಡಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಭಾಗವಹಿಸಿದ್ದರು.
**
ಕೋಲಾರ ಜಿಲ್ಲೆಯ 6 ತಾಲ್ಲೂಕುಗಳಲ್ಲಿ 5ನ್ನು ಬರ ಪೀಡಿತ ಎಂದು ಸರ್ಕಾರ ಘೋಷಿಸಿದೆ. ಆದರೆ ಮಾಲೂರನ್ನು ಮಾತ್ರ ಸೇರ್ಪಡೆ ಮಾಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. -ಮಂಜುನಾಥ ಗೌಡ, ಶಾಸಕ