ಹುಮನಾಬಾದ್: ‘ಮಾದಕ ವಸ್ತು ಸೇವನೆಯಿಂದ ಪ್ರಾಣಕ್ಕೆ ಆಪತ್ತು ಬರುತ್ತದೆ. ಮಾದಕ ವಸ್ತುಗಳ ದಾಸರಾಗುವುದರಿಂದ ಹಣ, ಸಮಯ ಒಳಗೊಂಡಂತೆ ಅಮೂಲ್ಯವಾದ ವಿದ್ಯಾರ್ಥಿ ಜೀವನ ಹಾಳಾಗುತ್ತದೆ’ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ ಎಂ.ಕಮತೆ ಹೇಳಿದರು.
ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಮತ್ತು ಶಾಹೀನ್ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕಾನೂನು ಅರಿವು–ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿದ ವಕೀಲ ಮಹ್ಮದ್ ಇಸ್ಮಾಯಿಲ್, ’ರ್ಯಾಂಗಿಂಗ್‘ ಹೆಸರಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಭವ್ಯ ಸಂಸ್ಕೃತಿಗೆ ಹೆಸರಾದ ದೇಶದಲ್ಲಿ ವಿದ್ಯಾರ್ಥಿಗಳು ನಡೆಸುವ ದುಷ್ಕೃತ್ಯದಿಂದ ಸೂಕ್ಷ್ಮ ಮನಸ್ಸಿನ ವಿದ್ಯಾರ್ಥಿಗಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ನಿದರ್ಶನಗಳಿವೆ. ಹಾಗಾಗಿ ಕಿರಿಯ ವಿದ್ಯಾರ್ಥಿಗಳು ಮೇಲೆ ಹಿರಿಯರು ರ್್ಯಾಗಿಂಗ್ ನಡೆಸಬಾರದು’ ಎಂದು ಸಲಹೆ ನೀಡಿದರು.
ಶ್ರೀಕಾಂತರಾಯ್ ಕುಲ್ಕರ್ಣಿ ಉಪನ್ಯಾಸ ನೀಡಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಪಿ.ಮುರಳಿ ಮೋಹನರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಮಹ್ಮದ್–ಅಲಿ, ಉಪಾಧ್ಯಕ್ಷ ಅಶೋಕ ಕೆ.ವರ್ಮಾ, ಕಾರ್ಯದರ್ಶಿ ಪ್ರಭು ನಾಗರಾಳೆ ಮಾತನಾಡಿದರು.
ಶಾಹೀನ್ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಇತ್ತಫ್ ಇಮ್ರಾನ್, ಪ್ರಾಚಾರ್ಯ ಶಾಂತಕುಮಾರ ಪತ್ರಿ, ವಕೀಲರಾದ ವಿರೇಖಾ ಪಾಟೀಲ, ರೇಖಾ, ಭೀಮರಾವ ಓತಗಿ, ಶ್ರೀಮಂತ ಬಿರಾದಾರ ಹಾಜರಿದ್ದರು. ಉಪನ್ಯಾಸಕಿ ಪ್ರಿಯಾ ನಿರೂಪಿಸಿದರು.
ಶಾಹೀನ್ ಶಿಕ್ಷಣ ಸಂಸ್ಥೆಯ 500ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.