ಹುಳಿಯಾರು: ಮತಿಘಟ್ಟ ಗ್ರಾಮದಲ್ಲಿ ಮಂಗಳವಾರ ಹಂದನಕೆರೆ ಪೊಲೀಸ್ ಠಾಣೆಯಿಂದ ನಡೆದ ಜನಸಂಪರ್ಕ ಸಭೆಯಲ್ಲಿ ಗ್ರಾಮದ ಪೊಲೀಸ್ ಉಪಠಾಣೆಗೆ ಸಿಬ್ಬಂದಿ ನೇಮಿಸುವಂತೆ ಸಾರ್ವಜನಿಕರು ಮನವಿ ಮಾಡಿದರು.
ಮುಖಂಡ ಆನಂದ್ ಕುಮಾರ್ ಮಾತನಾಡಿ, ‘ಮತಿಘಟ್ಟದಲ್ಲಿ 1865ರಲ್ಲಿಯೇ ಉಪಠಾಣೆ ಆರಂಭವಾಗಿದೆ. ಇದ ತಾಲ್ಲೂಕಿನ ಮೊದಲ ಪೊಲೀಸ್ ಠಾಣೆಯಾಗಿದೆ. ಹಂದನಕೆರೆಗೆ ಠಾಣೆ ಮಂಜೂರಾದ ನಂತರ ಈ ಠಾಣೆ ನಿರ್ಲಕ್ಷಿಸಲಾಗಿದೆ. ಉಪಠಾಣೆಗೆ ಕೂಡಲೇ ಸಿಬ್ಬಂದಿ ನೇಮಕ ಮಾಡಬೇಕು’ ಎಂದು ಒತ್ತಾಯಿಸಿದರು.
ಸಭೆ ಉದ್ಘಾಟಿಸಿದ ಕಾನ್ಕೆರೆ ತಮ್ಮಯ್ಯ, ‘ಪೊಲೀಸರು ಹಾಗೂ ಸಾರ್ವಜನಿಕರ ಬಾಂಧವ್ಯ ಉತ್ತಮವಾಗಿದ್ದರೆ ಕಾನೂನು ವ್ಯವಸ್ಥೆ ಸಹ ಉತ್ತಮವಾಗಿರುತ್ತದೆ’ ಎಂದರು.
ಹಂದನಕೆರೆ ಠಾಣೆ ಪಿಎಸ್ಐ ಟಿ.ಎನ್.ನರಸಿಂಹಮೂರ್ತಿ ಮಾತನಾಡಿ, ‘ಸಾರ್ವಜನಿಕರು ಭಯವಿಲ್ಲದೆ ಗ್ರಾಮಗಳಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ದೂರು ನೀಡಬಹುದು. ಸಮಸ್ಯೆಗಳು ಜಟಿಲವಾಗಿದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವ ಕೆಲಸ ಮಾಡುತ್ತೇವೆ’ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಮಲಾ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಆನಂದಮೂರ್ತಿ, ವೆಂಕಟೇಶ್, ಮುಖಂಡರಾದ ರಾಜು ಬಿಳಿಗಿಹಳ್ಳಿ, ಮಹಾದೇವು, ನಾಗರಾಜು, ಕೋಡಿಹಳ್ಳಿ ನಾಗರಾಜು, ಆಟೊ ಚಾಲಕರ ಸಂಘದ ಯೋಗೀಶ್, ಎಎಸ್ಐ ವೆಂಕಟೇಶ್, ಸಿಬ್ಬಂದಿಗಳಾದ ಸುರೇಶ್, ಸರ್ದಾರ್ ಇದ್ದರು.