ಬಸವನಬಾಗೇವಾಡಿ: ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆಯಲ್ಲಿ ಕಣಕಾಲ ಹತ್ತಿರ ನಿರ್ಮಾಣಗೊಳ್ಳುತ್ತಿರುವ ಹೂವಿನ ಹಿಪ್ಪರಗಿ ಶಾಖಾ ಕಾಲುವೆ ಕಾಮಗಾರಿ ಕಳಪೆಯಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆರೋಪಿಸಿದರು.
ಪಟ್ಟಣದಲ್ಲಿ ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಲುವೆ ನಿರ್ಮಾಣವಾದ ಹೊಲಗಳಿಗೆ ನೀರು ಹರಿದು ಕೃಷಿ ಚಟುವಟಿಕೆ ಇಮ್ಮಡಿಗೊಳ್ಳುತ್ತದೆ ಎಂಬ ಆಶಾಭಾವನೆ ಹೊಂದಿದ್ದ ಈ ಭಾಗದ ರೈತರಿಗೆ ಈಗ ನಿರಾಸೆಯಾಗಿದೆ’ ಎಂದರು.
‘ಇತ್ತೀಚೆಗೆ ಸುರಿದ ಮಳೆಯಿಂದಾಗಿ ಇಂಗಳೇಶ್ವರ ತಾಂಡಾ 1 ಹಾಗೂ 2 ರ ಮಧ್ಯದಲ್ಲಿನ ಕಾಲುವೆ ಕಿತ್ತು ಹೋಗಿದೆ’ ಎಂದು ಹೇಳಿದರು.
ಈ ರೀತಿ ಕಾಲುವೆಗಳು ನಿರ್ಮಾಣ ಗೊಂಡ ಕೆಲ ದಿನಗಳಲ್ಲೇ ಕಿತ್ತು ಹೋಗು ವುದನ್ನು ನೋಡಿದರೆ ಕಾಮಗಾರಿಯಲ್ಲಿ ಕಳಪೆ ಮಟ್ಟದ ಸಿಮೆಂಟ್ ಹಾಗೂ ಸುಣ್ಣ ಮಿಶ್ರಿತ ಮರಳು ಬಳಕೆ ಮಾಡಲಾಗಿದೆ. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆ ದಾರರನ್ನು ಗುರುತಿಸಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಬೇಕು.
ಳಪೆ ಕಾಮಗಾರಿ ನಡೆದ ಕಾಲುವೆಗಳ ಮರು ಟೆಂಡರ್ ಕರೆದು ಗುಣಮಟ್ಟದ ಕಾಮಗಾರಿ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಸುದ್ಧಿಗೋಷ್ಠಿಯಲ್ಲಿ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ರಾಠೋಡ, ಸಂಘಟನೆಯ ಮುಖಂಡ ರಾದ ಬಾಪುಗೌಡ ಬಿರಾದಾರ, ಡಿ.ಆರ್.ಪವಾರ, ಹೊನಕೇರಪ್ಪ ತೆಲಗಿ, ಎಸ್.ಎಸ್.ಮುಧೋಳ, ಶಿವಪ್ಪ ಅಂಗಡಗೇರಿ, ಪರಸಪ್ಪ ಅಂಗಡಗೇರಿ, ಸಿದ್ರಾಮ ಅಂಗಡಗೇರಿ, ಕಿಟ್ಟು ಪಿರಂಗಿ ಇತರರು ಇದ್ದರು.