ಡರ್ಬಿ, ಲಂಡನ್: ಇಲ್ಲಿ ನಡೆಯುತ್ತಿರುವ ಮಹಿಳಾ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ.
ಮೆಗ್ಲ್ಯಾನಿಂಗ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಈ ಬಾರಿಯ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿ ಈ ಕ್ರೀಡಾಂಗಣದಲ್ಲಿ ಕಣಕ್ಕಿಳಿದಿದೆ. ಭಾರತದ ಪಾಲಿಗೆ ಅದೃಷ್ಟದ ಅಂಗಳ ಎನಿಸಿರುವ ಇಲ್ಲಿ ಮಿಥಾಲಿ ರಾಜ್ ಬಳಗ ಗುಂಪು ಹಂತದಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿಯೂ ಜಯಗಳಿಸಿದೆ.
ಒಟ್ಟು ಆರು ಬಾರಿ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ಮತ್ತೊಮ್ಮೆ ಫೈನಲ್ ಪ್ರವೇಶಿಸುವ ಉಮೇದಿನಲ್ಲಿದೆ. ಭಾರತ ಸ್ಥಿತಿ ಭಿನ್ನವಾಗಿದ್ದು, ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ.
ಈ ಪಂದ್ಯದಲ್ಲಿ ಗೆಲ್ಲುವ ತಂಡ ಜುಲೈ 23ರಂದು ಕ್ರಿಕೆಟ್ ಕಾಶಿ ಲಾರ್ಡ್ಸ್ನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ, ಈಗಾಗಲೇ ಅಂತಿಮ ಹಂತ ತಲುಪಿರುವ ಇಂಗ್ಲೆಡ್ ಎದುರು ಪ್ರಶಸ್ತಿಗಾಗಿ ಸೆಣಸಲಿದೆ.
ಸದ್ಯ ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ 10 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 36ರನ್ಗಳಿಸಿ ಆಟ ಮುಂದುವರಿಸಿದೆ. ನಾಯಕಿ ಮಿಥಾಲಿ ರಾಜ್ ಹಾಗೂ ಹರ್ಮನ್ ಪ್ರೀತ್ ಕೌರ್ ಅವರು ಕ್ರೀಸ್ನಲ್ಲಿದ್ದಾರೆ.
ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂದಾನ(6) ಹಾಗೂ ಪೂನಮ್ ರಾವುತ್(14) ವಿಕೆಟ್ ಒಪ್ಪಿಸಿದ್ದಾರೆ. ಪಂದ್ಯಾವಳಿಯ ಆರಂಭದ ಎರಡು ಪಂದ್ಯದಲ್ಲಿ ಮಿಂಚಿದ್ದ, ಮಂದಾನ ಬಳಿಕ ಫಾರ್ಮ್ ಕಳೆದುಕೊಂಡಿದ್ದರು. ಅವರು ಇಲ್ಲಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು.
*
42 ಓವರ್ಗಳಿಗೆ ಸೀಮಿತ ಪಂದ್ಯ
ಮಹತ್ವದ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಕಾರಣ ಪಂದ್ಯವನ್ನು ನಿಗದಿತ 50 ಓವರ್ಗಳ ಬದಲು 42 ಓವರ್ಗಳಿಗೆ ಸೀಮಿತಗೊಳಿಸಲಾಗಿದೆ. ಮಳೆಯಿಂದಾಗಿ ಪಂದ್ಯ ಎರಡುವರೆ ತಾಸು ಸ್ಥಗಿತಗೊಂಡಿತ್ತು.