ನೋಡಲು ಪುಟ್ಟದಾಗಿರುವ ಕೆಂಪಿರುವೆಗಳ ಶಕ್ತಿ ಅವುಗಳಿಂದ ಕಚ್ಚಿಸಿಕೊಂಡವರಿಗೇ ಗೊತ್ತು! ಹಾಗೆಯೇ, ಜನಸಾಮಾನ್ಯ ನೋಡಲು ‘ಸಾಮಾನ್ಯ’ನಂತೆ ಇದ್ದರೂ ಆತನಲ್ಲೂ ತಾಕತ್ತು ಇರುತ್ತದೆ ಎಂಬುದನ್ನು ತೋರಿಸುವ ಸಿನಿಮಾ ‘ಕೆಂಪಿರ್ವೆ’. ಈ ಸಿನಿಮಾಕ್ಕೆ ನಿರ್ದೇಶಕರು ‘ಜೋಪಾನ ಕಚ್ಚುತ್ತೆ’ ಎಂಬ ಅಡಿಶೀರ್ಷಿಕೆ ನೀಡಿದ್ದಾರೆ.
ಈ ಚಿತ್ರದ ನಿರ್ದೇಶಕರು ವೆಂಕಟ್ ಭಾರದ್ವಾಜ್. ನಿವೇಶನ ಖರೀದಿಸಲು ಮುಂದಾಗಿ, ಮೋಸ ಹೋಗುವ ಕಥೆ ಈ ಚಿತ್ರದ್ದು. ಪ್ರಮುಖ ಪಾತ್ರದಲ್ಲಿ ಹಿರಿಯ ನಟ ದತ್ತಣ್ಣ ಕಾಣಿಸಿಕೊಳ್ಳಲಿದ್ದಾರೆ. ಸಯ್ಯಾಜಿ ಶಿಂಧೆ ಅವರು ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರಂತೆ.
ರೂಪಾ ಹೆಗಡೆ, ಸುವಿಲ್ ರಾಸನ್ ಕೂಡ ಈ ಚಿತ್ರದಲ್ಲಿದ್ದಾರೆ. ಸಂಗೀತ ನಿರ್ದೇಶನ ಕಿಶನ್ ಅವರದ್ದು. ಛಾಯಾಗ್ರಹಣ ವಿಶ್ವಾಸ್ ಅವತಿ ಅವರದ್ದು.
ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗ ಪ್ರಶಾಂತ್ ಅರಸ್ ಅವರು ನವೀನ್, ಭಾಸ್ಕರ್, ಅನಿಲ್ ಜೊತೆಗೂಡಿ ಸಿನಿಮಾ ನಿರ್ಮಿಸಿದ್ದಾರೆ. ಈ ಚಿತ್ರ ಇನ್ನೊಂದು ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.