ಆಲಮಟ್ಟಿ(ನಿಡಗುಂದಿ): ಆಲಮಟ್ಟಿ ಜಲಾಶಯದ ಬಲಭಾಗದ ಆಲಮಟ್ಟಿ ವಿದ್ಯುದಾಗಾರದಲ್ಲಿ ಗುರುವಾರ ಕರ್ನಾ ಟಕ ವಿದ್ಯುತ್ ಉತ್ಪಾದನಾ ನಿಗಮದ (ಕೆಪಿಸಿಎಲ್) 48ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಆಲಮಟ್ಟಿ ವಿದ್ಯುದಾಗಾರದ ಅಧೀಕ್ಷಕ ಎಂಜಿನಿಯರ್ ಸಿ. ಶಿವಶಂಕರ ಮಾತನಾಡಿ, ‘1973ರಲ್ಲಿ ಆರಂಭ ಗೊಂಡ ವಿದ್ಯುತ್ ಉತ್ಪಾದನಾ ನಿಗಮಕ್ಕೆ ಪ್ರತ್ಯೇಕ ನಿಗಮದ ಸ್ಥಾನಮಾನ ನೀಡಿ, ಅದಕ್ಕೆ ಪ್ರೋತ್ಸಾಹ ನೀಡಿದ ಎಸ್. ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ ಅವರ ದೂರದೃಷ್ಠಿತ್ವ ಶ್ಲಾಘನೀಯ’ ಎಂದರು.
‘ಪ್ರಸ್ತುತ ಜಲ, ಉಷ್ಣ ವಿದ್ಯುತ್ ಸೇರಿದಂತೆ ನಾನಾ ಬೇರೆ ಬೇರೆ ಮೂಲಗಳಿಂದ ವಿದ್ಯುತ್ ಉತ್ಪಾದಿಸು ತ್ತಿದ್ದು, ಅದಕ್ಕೆಲ್ಲಾ ನೀರೇ ಮುಖ್ಯ ಆಧಾರ. ನೀರಿನ ಕೊರತೆಯ ಕಾರಣ ಜಲವಿದ್ಯುತ್ ಉತ್ಪಾದನಾ ಕೇಂದ್ರವಷ್ಟೇ ಅಲ್ಲದೇ, ಉಷ್ಣ ವಿದ್ಯುತ್ ಸ್ಥಾವರವೂ ಬಂದಾಗಿವೆ.
ಪ್ರಸ್ತುತ ರಾಜ್ಯದಲ್ಲಿ ನಿತ್ಯ 159 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯ ಅಗತ್ಯವಿದ್ದು, ಕೆಪಿಸಿಎಲ್ನ ಎಲ್ಲಾ ವಿದ್ಯುತ್ ಉತ್ಪಾದನಾ ಕೇಂದ್ರದಿಂದ ಕೇವಲ 40 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಇನ್ನುಳಿದ ವಿದ್ಯುತ್ನ್ನು ಖಾಸಗಿಯಿಂದ ಖರೀದಿಸಬೇಕಾದ ಅನಿವಾರ್ಯತೆ ಇದೆ’ ಎಂದರು.
ನಿವೃತ್ತ ಅಧೀಕ್ಷಕ ಎಂಜಿನಿಯರ್ ಎ.ಎನ್. ಮುಳಗುಂದ ಮಾತನಾಡಿ, ‘ಸೇವೆಯಲ್ಲಿರುವಾಗ ಸಿಬ್ಬಂದಿ ಜೊತೆ ಉತ್ತಮ ಬಾಂಧವ್ಯ ಹೊಂದಿರಬೇಕು. ಆಲಮಟ್ಟಿ ಜಲವಿದ್ಯುತ್ ಉತ್ಪಾದನಾ ಕೇಂದ್ರದ ಆರಂಭದ ಕಾಮಗಾರಿ 1992 ರಿಂದ 97 ರವರೆಗೆ ತಾವು ಇಲ್ಲಿ ಕೆಲಸ ಮಾಡಿದ ಘಟನೆಗಳನ್ನು ಸ್ಮರಿಸಿದರು. ಕೆಪಿಸಿಎಲ್ ಇನ್ನಷ್ಟು ಹೊಸ ಹೊಸ ವಿದ್ಯುತ್ ಉತ್ಪಾದನಾ ಯೋಜನೆಗಳನ್ನು ಆರಂಭಿಸಿ, ರಾಜ್ಯದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಬೇಕು’ ಎಂದರು.
ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಬಿ. ಬಿಸ್ಲಾಪುರ ಮಾತನಾಡಿ, ‘ಆಲಮಟ್ಟಿಯ ಜಲ ವಿದ್ಯುದಾಗಾರ, ಉತ್ತಮ ತಂತ್ರಜ್ಞಾನ ಹೊಂದಿದ ಉತ್ಪಾದನಾ ಕೇಂದ್ರವಾಗಿದೆ. ಬುಧವಾರದಿಂದ ಪ್ರಸಕ್ತ ಸಾಲಿನ ವಿದ್ಯುತ್ ಉತ್ಪಾದನೆ ಆರಂಭಿಸಿದೆ ಎಂದರು.
ನೌಕರರಲ್ಲಿ ವೈಮನಸ್ಸು, ಏಕತಾನತೆ ದೂರವಾಗಿ, ಸಿಬ್ಬಂದಿಯಲ್ಲಿ ಹೊಂದಾಣಿಕೆಯ ಮನೋಭಾವ ಬೆಳೆಸ ಬೇಕೆಂಬ ಉದ್ದೇಶದಿಂದ ಕೆಪಿಸಿಎಲ್ನ ಆಗಿನ ವ್ಯವಸ್ಥಾಪಕ ನಿರ್ದೇಶಕ ಜೈರಾಜ್ ಅವರು ಸಂಸ್ಥಾಪನಾ ದಿನ ಆಚರಣೆ ಜಾರಿಗೆ ತಂದರು’ ಎಂದರು.
ದಿನಾಚರಣೆ ಅಂಗವಾಗಿ ನೌಕರರಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸ ಲಾಯಿತು. ವೇದಿಕೆಯಲ್ಲಿ ಎಚ್.ಬಿ. ಸೂಳಿಬಾವಿ, ಕಾರ್ಯನಿರ್ವಾಹಕ ಎಂಜಿನಿಯರ್ಗಳಾದ ಪ್ರಭು ಕರಿಯನ್ನವರ, ಎಂ.ಸಿ. ನಿತೀನಕುಮಾರ ಇದ್ದರು. ಸಾಹಿತಿ ಎ.ಎನ್. ಅಂಬಿ ಸ್ವಾಗತಿಸಿದರು. ಎಸ್.ಎಂ. ಸಣ್ಣಕ್ಕಿ ನಿರೂಪಿಸಿದರು. ಎಂ. ನೀಲಾ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.