ತುಮಕೂರು: ರಾಜ್ಯದಲ್ಲಿ 1500 ಕೆರೆಗಳ ಡಿನೋಟಿಫಿಕೇಶನ್ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂಬಾಲಕರ ಚಿತಾವಣೆ ಇದೆ ಎಂದು ಬಿಜೆಪಿ ಅಭಿವೃದ್ಧಿ ಪ್ರಕೋಷ್ಠಕದ ರಾಜ್ಯ ಸಂಚಾಲಕ ಜಿ.ಎಸ್.ಬಸವರಾಜ್ ಆರೋಪಿಸಿದರು.
ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರು, ತುಮಕೂರು, ದಾವಣಗೆರೆ ಮುಂತಾದ ನಗರಗಳಲ್ಲಿ ಕೆರೆಗಳನ್ನು ಮುಖ್ಯಮಂತ್ರಿ ಹಿಂಬಾಲಕರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಭೂಮಿ ಕಬಳಿಸಲು ಈ ಹುನ್ನಾರ ನಡೆಸಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.
‘ಚುನಾವಣೆಗಾಗಿ ತಮ್ಮ ಹಿಂಬಾಲಕರಿಗೆ ಹಣ ಮಾಡಿಕೊಡಲು ಕೆರೆಗಳನ್ನು ಡಿನೋಟಿಫಿಕೇಶನ್ ಮಾಡಲು ಮುಖ್ಯಮಂತ್ರಿ ಹೊರಟಿದ್ದಾರೆ’ ಎಂದು ಆರೋಪಿಸಿದರು.
‘ಸರ್ಕಾರದ ಈ ನಿರ್ಧಾರಕ್ಕೆ ಸಂಪುಟದ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೂ ಈ ವಿಷಯದಲ್ಲಿ ಸಿದ್ದರಾಮಯ್ಯ ಮುಂದುವರೆದು ಉದ್ಧಟತನ ತೋರುತ್ತಿದ್ದಾರೆ. ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಜನರು ರಾಜ್ಯದಾದ್ಯಂತ ಆಂದೋಲನ ಮಾಡಲಿದ್ದಾರೆ’ ಎಂದು ಎಚ್ಚರಿಸಿದರು.