ತಿರುವನಂತಪುರಂ: ‘ಆರು ತಿಂಗಳಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಬೇಕು. ಇಲ್ಲವಾದರೆ ಕೈಕಾಲು ಕಳೆದುಕೊಳ್ಳಲು ಸಿದ್ಧನಾಗಿರು’ ಎಂದು ಮಲಯಾಳಂ ಖ್ಯಾತ ಲೇಖಕ ಕೆ.ಪಿ.ರಾಮನುಣ್ಣಿ ಅವರಿಗೆ ಪತ್ರ ಮುಖೇನ ಬೆದರಿಕೆಯೊಡ್ಡಲಾಗಿದೆ.
ಮಲ್ಲಾಪುರಂನ ಮಂಜೇರಿಯಿಂದ ರವಾನೆಯಾಗಿರು ಪತ್ರದಲ್ಲಿ ಲೇಖಕ ರಾಮನುಣ್ಣಿಗೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಲಾಗಿದೆ. 6 ತಿಂಗಳಲ್ಲಿ ಇಸ್ಲಾಂ ಧರ್ಮವನ್ನು ಒಪ್ಪಿಕೊಳ್ಳದಿದ್ದರೆ ಬಲಗೈ ಹಾಗೂ ಎಡಗಾಲು ಕಳೆದುಕೊಳ್ಳಬೇಕಾಗುತ್ತದೆ ಎಂದು ಬೆದರಿಕೆ ಸಂದೇಶ ಕಳುಹಿಸಲಾಗಿದೆ.
ಈ ಕುರಿತು ಕೋಝಿಕೋಡ್ ನಗರ ಪೊಲೀಸ್ ಆಯುಕ್ತರಲ್ಲಿ ರಾಮನುಣ್ಣಿ ಶುಕ್ರವಾರ ದೂರು ದಾಖಲಿಸಿದ್ದಾರೆ.
‘ಇತ್ತೀಚೆಗೆ ಬರೆದಿರುವ ಲೇಖನಗಳು ಮುಸ್ಲಿಂ ಯುವಕರ ಹಾದಿ ತಪ್ಪಿಸುವಂತಿದೆ. ಮುಸ್ಲಿಮರ ಧಾರ್ಮಿಕತೆಗೆ ಧಕ್ಕೆ ಉಂಟಾಗುವಂತೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದ ಪ್ರೊ.ಟಿ.ಜೆ.ಜೋಸೆಫ್ ಬಲಗೈ ಕಳೆದುಕೊಂಡಂತೆ ನಿಮ್ಮಗತಿಯೂ ಆಗಲಿದೆ. ಜತೆಗೆ ಎಡಗಾಲನ್ನೂ ಕಳೆದುಕೊಳ್ಳುವಿರಿ’ ಎಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ರಾಮನುಣ್ಣಿ ತಿಳಿಸಿದ್ದಾರೆ.
ರಾಮನುಣ್ಣಿ ಅವರ ಮುಸ್ಲಿಂ ಯುವಕ ಹಾಗೂ ಹಿಂದು ಯುವತಿ ನಡುವಿನ ಪ್ರೇಮ ಕಥೆಯನ್ನು ಒಳಗೊಂಡ ‘ಸೂಫಿ ಪರಂಜ ಕಥಾ’ ಕಾದಂಬರಿಯು ಸಿನಿಮಾ ಆಗಿದೆ. ಕಾದಂಬರಿಗಾರ, ಸಣ್ಣಕಥೆಗಾರನಾಗಿ ಗುರುತಿಸಿಕೊಂಡಿರುವ ಇವರಿಗೆ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ವಯಲಾರ್ ಪ್ರಶಸ್ತಿಗಳು ಸಂದಿವೆ.