ಬಳ್ಳಾರಿ: ನಗರದ ಪಾದಾಚಾರಿ ರಸ್ತೆಯ ಒತ್ತುವರಿ ತೆರವು ಕಾರ್ಯಾಚರಣೆ ಮುಂದಿನ ವಾರದಿಂದಲೇ ಪಾಲಿಕೆ ಸಹ ಯೋಗದಲ್ಲಿ ನಡೆಯಲಿದೆ. ವರ್ತಕರು ಅದಕ್ಕೆ ಮುಂಚೆಯೇ ಸ್ಥಳದಿಂದ ಜಾಗ ಖಾಲಿ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಎಚ್ಚರಿಕೆ ನೀಡಿದರು.
ಸುಗಮ ಸಂಚಾರ ವ್ಯವಸ್ಥೆಯ ಕುರಿತು ನಗರದ ಬಿಡಿಎಎ ಸಭಾಂಗಣ ದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾರ್ವ ಜನಿಕರು ಹಾಗೂ ಸಂಘ–ಸಂಸ್ಥೆ ಪ್ರತಿನಿಧಿ ಗಳ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ಪಾದಚಾರಿ ರಸ್ತೆಯಲ್ಲಿ ಜನರಿಗೂ ನಡೆದಾಡಲು ಅವಕಾಶ ಇರುವ ರೀತಿಯಲ್ಲಿ ವ್ಯಾಪಾರ ನಡೆಸುವ ವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ.
ಇಡೀ ರಸ್ತೆಯನ್ನು ಒತ್ತುವರಿ ಮಾಡಿರು ವವರ ವಿರುದ್ಧ ಕ್ರಮ ಖಚಿತ ಎಂದು ಸ್ಪಷ್ಟಪಡಿಸಿದರು. ಅಂಗಡಿ–ಮಳಿಗೆಗಳ ವರ್ತಕರೂ ಪಾದಚಾರಿ ರಸ್ತೆಯನ್ನು ಒತ್ತುವರಿ ಮಾಡುವುದನ್ನು ನಿಲ್ಲಿಸಿ ಸಾಮಗ್ರಿಗಳನ್ನು ಒಳಗೇ ಇಟ್ಟುಕೊಳ್ಳಬೇಕು ಎಂದರು.
21 ಸ್ಥಳ ಅಭಿವೃದ್ಧಿ: ಇದೇ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಆಯುಕ್ತ ಎಂ.ಕೆ.ನಲ್ವಡಿ, ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಹೀಗಾಗಿ, ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳಿಗಾಗಿ ನಗರದ 21 ಸ್ಥಳಗಳನ್ನು ಗುರುತಿಸಲಾಗಿದ್ದು, ₹4.80 ಕೋಟಿ ವೆಚ್ಚದಲ್ಲಿ ಕ್ರಿಯಾಯೋಜನೆ ಸಿದ್ದ ಪಡಿಸಲಾಗಿದೆ.
ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ದೊರೆತ ತಕ್ಷಣ ಅನುಷ್ಠಾನಗೊಳಿಸ ಲಾಗುವುದು ಎಂದರು. ಮೇಯರ್ ವೆಂಕಟರಮಣ, ಬುಡಾ ಆಯುಕ್ತ ಜಹೀರ್ ಅಬ್ಬಾಸ್, ಉಪ ವಿಭಾಗಾಧಿಕಾರಿ ಪಿ.ಎನ್. ಲೋಕೇಶ ಇದ್ದರು.
ಸಭಿಕರಿಂದ ಹಲವು ಸಲಹೆ.....
ಗಡಿಗಿ ಚೆನ್ನಪ್ಪ ವೃತ್ತದಿಂದ ರಸ್ತೆ ವಿಸ್ತರಣೆ ಅಗತ್ಯ. ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದರೆ ಮಾತ್ರ ಪಾದಚಾರಿಗಳಿಗೆ ಅನುಕೂಲವಾಗುತ್ತದೆ. ಶಾಲೆ–ಕಾಲೇಜುಗಳ ಬಳಿ ರಸ್ತೆ ಉಬ್ಬನ್ನು ಅಳವಡಿಸಬೇಕು. ಅಬ್ಬರ, ಅತಿವೇಗದಿಂದ ವಾಹನ ಚಾಲನೆ ಮಾಡುವ, ವಿದ್ಯಾರ್ಥಿನಿಯರನ್ನು ಚುಡಾಯಿಸುವ ಬೈಕ್ ಸವಾರರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು ಎಂಬ ಸಲಹೆಗಳನ್ನು ಸಭಿಕರು ನೀಡಿದರು.
ಪಾದಚಾರಿ ರಸ್ತೆ ಒತ್ತುವರಿ ಕುರಿತು ಮುಖಂಡ ಈಶ್ವರ ಮೇಕಲರೆಡ್ಡಿ ಫೋಟೋಗಳ ಸಮೇತ ವಿವರಿಸಿದರು. ಸುಗಮ ಸಂಚಾರ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಗಡಿಗಿ ಚೆನ್ನಪ್ಪ ವೃತ್ತ, ಕನಕದುರ್ಗಮ್ಮ ವೃತ್ತದಲ್ಲಿ ಸಂಚಾರ ದಟ್ಟಣೆ ಇದ್ದು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.