ಸಾವಳಗಿ: ಸಮೀಪದ ತುಬಚಿ ಗ್ರಾಮದಲ್ಲಿ ಅನ್ನಭಾಗ್ಯ ಯೋಜನೆಯಡಿ ನ್ಯಾಯಬೆಲೆ ಅಂಗಡಿಗಳಲ್ಲಿ ಅವಧಿ ಮೀರಿದ ತಾಳೆ ಎಣ್ಣೆ ವಿತರಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿಂದೆ ಬಿಪಿಎಲ್ ಪಡಿತರ ಚೀಟಿದಾರರಿಗೆ ಅಕ್ಕಿ, ಸಕ್ಕರೆ, ಜತೆಗೆ ತಾಳೆ ಎಣ್ಣೆ, ಗೋದಿ ರಿಯಾಯಿತಿ ದರದಲ್ಲಿ ನೀಡಲಾಗುತ್ತಿತ್ತು.
ಆದರೆ ಕೆಲ ತಿಂಗಳಿಂದ ಎಲ್ಲವನ್ನು ನಿಲ್ಲಿಸಿ ಕೇವಲ ಅಕ್ಕಿ ಮಾತ್ರ ನೀಡಲಾಗುತ್ತಿತು. ಈ ತಿಂಗಳಿನಿಂದ ಮತ್ತೆ ತಾಳೆ ಎಣ್ಣೆ ವಿತರಣೆ ಆರಂಭವಾಗಿದೆ. ಈ ಎಣ್ಣೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕ ಎದುರಾಗಿದೆ.
‘2017ರ ಫೆಬ್ರುವರಿಯಲ್ಲಿ ಪ್ಯಾಕ್ ಆದ ತಾಳೆ ಎಣ್ಣೆಯನ್ನು ಜುಲೈನಲ್ಲಿ ನೀಡಲಾಗುತ್ತಿದೆ. ಆದರೆ, ಈ ಪ್ಯಾಕೆಟ್ನಲ್ಲಿ ನಮೂದಿಸಿರುವಂತೆ ಪ್ಯಾಕ್ ಆದ ನಾಲ್ಕು ತಿಂಗಳಲ್ಲಿ ಇದನ್ನು ಬಳಸಬೇಕು. ನಾಲ್ಕು ತಿಂಗಳು ಕಳೆದ ನಂತರವೇ ಬಿಪಿಎಲ್ ಪಡಿತರ ಚೀಟಿದಾರರಿಗೆ ನೀಡಲಾಗಿದೆ’ ಎಂದು ನಾಗರಿಕರು ದೂರಿದರು.
ಈ ಕುರಿತು ನ್ಯಾಯಬೆಲೆ ಅಂಗಡಿಯವರನ್ನು ಕೇಳಿದರೆ, ‘ಸರ್ಕಾರ ನೀಡಿದ ಪಾಕೆಟ್ ಅನ್ನೇ ನಾನು ನೀಡಿದ್ದೇವೆ. ತೆಗೆದುಕೊಳ್ಳುವುದು, ಬಿಡುವುದು ನಿಮಗೆ ಬಿಟ್ಟದ್ದು’ ಎನ್ನುತ್ತಾರೆ.
‘ಸಮಸ್ಯೆ ನನ್ನ ಗಮನಕ್ಕೂ ಬಂದಿದೆ. ಸಂಬಂದಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಗುಣಮಟ್ಟದ ತಾಳೆ ಎಣ್ಣೆ ವಿತರಿಸಲು ಸೂಚಿಸುತ್ತೇನೆ’ ಎಂದು ಜಮಖಂಡಿ ತಹಶೀಲ್ದಾರ್ ಪ್ರಶಾಂತ ಚನ್ನಗೊಂಡ ಪ್ರತಿಕ್ರಿಯೆ ನೀಡಿದರು.