ನವದೆಹಲಿ: ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಮನಾಥ್ ಕೋವಿಂದ್ ಅವರ ಕಾರ್ಯದರ್ಶಿಯಾಗಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಮಾಜಿ ಕಾರ್ಯದರ್ಶಿ ಸಂಜಯ್ ಕೊಠಾರಿ ಅವರನ್ನು ನೇಮಕ ಮಾಡಲಾಗಿದೆ.
ನವದೆಹಲಿಯಲ್ಲಿ ಗುಜರಾತ್ ಸರ್ಕಾರದ ಸ್ಥಾನಿಕ ಆಯುಕ್ತರಾಗಿರುವ ಭರತ್ ಲಾಲ್ ಅವರನ್ನು ಜಂಟಿ ಕಾರ್ಯದರ್ಶಿಯಾಗಿ ಹಾಗೂ ಹಿರಿಯ ಪತ್ರಕರ್ತ, ಒಆರ್ಎಫ್ ಫೆಲೋ ಅಶೋಕ್ ಮಲ್ಲಿಕ್ ಅವರನ್ನು ಮಾಧ್ಯಮ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಕೇಂದ್ರ ಸರ್ಕಾರವು ಶುಕ್ರವಾರ ರಾತ್ರಿ ನೇಮಕಾತಿ ಪತ್ರ ಕಳುಹಿಸಿಕೊಟ್ಟಿದೆ. ಕೊಠಾರಿ ಅವರು ನವದೆಹಲಿಯ ಪ್ರಧಾನಿ ಕಚೇರಿಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ ಮಿಶ್ರಾ ಅವರ ಆಪ್ತರು ಎನ್ನಲಾಗಿದೆ.
ರಾಮನಾಥ್ ಕೋವಿಂದ್ ಅವರು ಜುಲೈ 17ರಂದು ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀರಾ ಕುಮಾರ್ ಅವರಿಗಿಂತ ಹೆಚ್ಚು ಮತ ಪಡೆದು 14ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.
ಕೋವಿಂದ್ ಅವರು ಜುಲೈ 25ರಂದು ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ರಾಜಕೀಯ ಮುಖಂಡರು, ಗಣ್ಯರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.