ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮರಿ ಪಕ್ಕದ ಕೊನೆಯ ಹಳ್ಳಿ

Last Updated 22 ಜುಲೈ 2017, 19:30 IST
ಅಕ್ಷರ ಗಾತ್ರ

*ಶ್ರೀಧರ್. ಎಸ್. ಸಿದ್ದಾಪುರ

ಬಗ್ದೋದ್ರದಿಂದ ಬೆಂಗಳೂರಿಗೆ ನೇರ ವಿಮಾನವಿದೆ. ಅಲ್ಲಿಂದ ಜೀಪ್ ಮೂಲಕ ಗ್ಯಾಂಗ್ ಟಾಕ್‌ಗೆ ಕೆಲವೇ ಗಂಟೆಗಳ ಪ್ರಯಾಣ. ಗ್ಯಾಂಗ್ ಟಾಕ್‌ನಲ್ಲಿ ಅನುಮತಿ ಪಡೆದು ಲಾಚೆನ್‌ಗೆ ಜೀಪ್‌ನಲ್ಲಿ ಪ್ರಯಾಣ ಬೆಳೆಸಿದೆವು. ಲಾಚೆನ್‌ಗೆ ಒಂದು ದಿನದ ಪ್ರಯಾಣ. ಬೆಂಗಳೂರಿಂದ ಬಗ್ದೋದ್ರಕ್ಕೆ . ಒಬ್ಬರಿಗೆ ಸುಮಾರು 16 ಸಾವಿರ ಪ್ರಯಾಣದ ಖರ್ಚು, ಜೊತೆಗೆ ಇತರೆ ಖರ್ಚು 20 ಸಾವಿರದಷ್ಟು ಸೇರಿತು.

ಲಾಚೆನ್‌ನಿಂದ ಗುರುದೊಂಗ್‌ಮಾರ್‌

ಸಿಕ್ಕಿಂ ಸೀಮೆಯ ಪೂರ್ವೋತ್ತರದ ಕೊನೆಯ ಹಳ್ಳಿ ಲಾಚೆನ್. ಎದೆ ಡವಗುಟ್ಟುವ ಕಮರಿ ಪಕ್ಕದಲ್ಲೇ ಮಲಗಿರುವ ಹಳ್ಳಿ. ನಾಗರಿಕತೆಯ ಕೊನೆಯ ತಾಣ. ನಾವಿಲ್ಲಿ ಬಂದಿಳಿದಾಗ ಸಂಜೆ ಆರು ಗಂಟೆ. ಎರಡು ಬೃಹತ್ ಬೆಟ್ಟದ ನಡುವಿನ ಪುಟ್ಟ ಹಳ್ಳಿ ನಿದ್ರೆಗೆ ಜಾರುತಲಿತ್ತು.

ಬೆಂಗಳೂರಿನಿಂದ ಪಶ್ಚಿಮ ಬಂಗಾಲದ ಬಗ್ದೋದ್ರಕ್ಕೆ ನೇರ ವಿಮಾನ ಸಂಪರ್ಕವಿದೆ. ನಾಲ್ಕು ಗಂಟೆಯ ಪ್ರಯಾಣ. ಬಗ್ದೋದ್ರ ಏರ್‌ಪೋರ್ಟಿನಿಂದ ಒಂದೂವರೆ ದಿನದ ಪ್ರಯಾಣ. ಏರು ದಾರಿಯಲಿ ಹೊಟ್ಟೆಯೊಳಗಿರುವುದನ್ನೆಲ್ಲಾ ಹೊರ ಹಾಕುವಂತಹ ಕುಲುಕಾಟದ ಪ್ರಯಾಣ. ಗುರುದೊಂಗ್ ಮಾರ್ ಎಂಬ ವಿಶಿಷ್ಟ ಸರೋವರ ನೋಡಲು ಇಲ್ಲಿ ತನಕ ಪ್ರಯಾಣ ಬೆಳೆಸಿದ್ದೆವು.

ಬಿಕೋ ಎನ್ನುವ ಊರು

ವರ್ಷದ ಕೆಲವೇ ದಿನಮಾನದಲ್ಲಿ ಪ್ರವಾಸಿಗರಿಂದ ಗಿಜಿಗುಡುವ ಊರು. ನಾವು ಹೋದಾಗ ಬಿಕೋ ಎನ್ನುತ್ತಿತ್ತು. ಅಲ್ಲಲ್ಲಿ ಒಂದೆರಡು ಗುಂಪುಗಳಿಗಿದ್ದವು. ಹಿಮ ಬೆಟ್ಟಗಳ ಪಾದದಡಿಯಲ್ಲಿ ಮಗುವಾಗಿ ಮಲಗಿಹ ಹಳ್ಳಿ. ಸಣ್ಣ ಶಾಲೆ, ಬೆಳಿಗ್ಗೆ 9 ರಿಂದ 3ರವರೆಗೆ ಮಾತ್ರ ಕಾರ‍್ಯಾಚರಿಸುವ ಪೋಸ್ಟಾಫೀಸು ಈ ಊರಿನಲ್ಲಿರುವ ಸೌಲಭ್ಯಗಳು. ಬೆಟ್ಟದ ಮೇಲೊಂದು ಬುದ್ಧನ ದೇವಾಲಯ. ಕೇವಲ ಒಂದು ಕಿ.ಮೀ ವ್ಯಾಪಿಸಿರುವ ಊರು. ಸಾಂಬಾರಿನಲ್ಲಿ ಸಿಗುವ ಸಾಸಿವೆಯಂತೆ ಚದುರಿದ ನಾಲ್ಕಾರು ಮನೆಗಳು, ಹತ್ತಾರು ಹೋಟೆಲುಗಳು ಇರುವ ಹಿಮದ ನಾಡಿನ ಪುಟಾಣಿ ಗ್ರಾಮ. ಬಯಲಿನಿಂದ ಸುಮಾರು 8,838 ಅಡಿ ಎತ್ತರದಲ್ಲಿದೆ!

ಬೆಳಗ್ಗೆ ಬೇಗ ಏಳುವ ಇಲ್ಲಿನವರು ತುಂಬಾ ಸರಳರು ಹಾಗೂ ಸಜ್ಜನರು. ತಮ್ಮ ಪಾಡಿಗೆ ತಾವಿದ್ದು, ಪ್ರವಾಸಿಗರಿಗೂ ನೆರವಾಗುವುದು ಇವರಿಗೆ ಇಷ್ಟ. ಅವರು ತೋರಿದ ಪ್ರೀತಿ ಮರೆಯುವಂತಿಲ್ಲ. ನಾವಿದ್ದ ಮನೆಯವರು ‘ಊಟ ಮಾಡಿಕೊಂಡೇ ಹೊರಡಿ, ಮುಂದೆ ನಿಮಗೆ ಎಲ್ಲೂ ಊಟ ಸಿಗದು’ ಎಂದು ಅಕ್ಷರಶಃ ಅಡ್ಡಗಟ್ಟಿದ್ದರು. ಒಂದು ಹೋಮ್ ಸ್ಟೇನವರಂತೂ ನಾವು ಹೇಳಿದ ಅಲ್ಲಿನ ವಿಶೇಷ ಖಾದ್ಯವೊಂದನ್ನು ನಮ್ಮ ಕೋರಿಕೆ ಮೇರೆಗೆ ಮಾಡಿ ಬಡಿಸಿದ್ದರು. ನಾವಿದ್ದ ಹೋಟೆಲಿನಲ್ಲೊಬ್ಬ ಏಳನೇ ತರಗತಿ ಕಲಿಯುತ್ತಿದ್ದ ಹುಡುಗನಂತೂ ಯಾವಾಗ ತಿಂಡಿಗೆ ಬರುತ್ತೀರಿ ಎಂದು ಪ್ರೀತಿಯಿಂದ ಕೇಳುತ್ತಲೇ ಇರುತ್ತಿದ್ದ.

ಮರುದಿನ ಬೆಳಗ್ಗೆ ಹಕ್ಕಿ ಫೋಟೋ ತೆಗೆಯುವ ವೇಳೆ ಎಲ್ಲೆಲ್ಲಿ ಯಾವ ಹಕ್ಕಿ ಎಲ್ಲಿ ಕೂರುವುದೆಂದು ದಾರಿಹೋಕನೊಬ್ಬ ಬೆಳಗ್ಗೆ 5 ಗಂಟೆಗೆ ಅವುಗಳ ಇಂಗ್ಲಿಷ್ ಹೆಸರಿನೊಂದಿಗೇ ಹೇಳಿಹೋದ. ಇಲ್ಲಿನ ಮನೆಗಳು ಬಹಳ ವಿಶಿಷ್ಟ. ಮರದ ಗೋಡೆಗಳ, ಕಲ್ಲಿನ ಹೊದಿಕೆಯ ಮಾಡು. ಪ್ರತಿ ಮನೆಯ ಕಿಟಕಿ ಬಾಗಿಲುಗಳನ್ನು ಸಮಯ ಕೊಟ್ಟು ಸಿಂಗರಿಸುತ್ತಾರೆ. ಒಂದೊ ಎರಡೋ ಪುಟ್ಟ ಕೋಣೆಯ ಪುಟಾಣಿ ಮನೆಗಳಲ್ಲಿ ಇವರ ವಾಸ. ಇಂತಹ ಒಂದಂತಸ್ತಿನ ಮನೆಗಳಿಗೆ ತಲಗಟ್ಟೆಂಬುದೇ ಇರದು! ಒಳ ಕೋಣೆಯನ್ನು ಶಿಸ್ತಾಗಿ ಜೋಡಿಸಿಟ್ಟಿರುತ್ತಾರೆ. ಜಾಗವಿರದ ಮನೆಗಳ ತೊಲೆಗಳ ಮೇಲೂ ಅನೇಕ ಗಿಡಗಳ ತೂಗುಬುಟ್ಟಿಗಳು ನೇತು ಬಿದ್ದಿರುತ್ತಿದ್ದವು. ಇವರ ಸೌಂದರ್ಯ ಪ್ರಜ್ಞೆ ಮೆಚ್ಚಲೇಬೇಕು.

ಇಲ್ಲಿನ ಮಹಿಳೆಯರನ್ನು ಮೆಚ್ಚಬೇಕು. ಬಹು ಕಷ್ಟಜೀವಿಗಳು. ಹೋಟೆಲ್ ಉದ್ಯಮದಿಂದ ಹಿಡಿದು ರಸ್ತೆ ಕಾಮಗಾರಿಯಲ್ಲೆಲ್ಲಾ ಇವರದೇ ಕೈಚಳಕ. ಮನೆ ಸಂಭಾಳಿಸಿಕೊಂಡು ಅದು ಹೇಗೋ ಹೋಟೆಲ್ ನೋಡಿಕೊಳ್ಳುತ್ತಾರೆ. ಚಳಿ ಹವೆಗೋ ಅಥವಾ ಅವರ ವಂಶವಾಹಿಯ ಕಾರಣಕ್ಕೋ ಹೆಚ್ಚಿನೆಲ್ಲಾ ಮಹಿಳೆಯರು ಸ್ಫುರದ್ರೂಪಿಗಳು. ಮನೆಯಿಂದ ಹೊರ ಹೊರಡುವ ಮುನ್ನ ಒಂದಿಷ್ಟು ಲಿಪ್‌ಸ್ಟಿಕ್ ಬಳಿದುಕೊಳ್ಳದೇ ಹೊರಡುತ್ತಿರಲಿಲ್ಲ. ಬೆಳಗ್ಗೆ 7 ಕ್ಕೆ ನಾವು ಹೊಕ್ಕ ಸಣ್ಣ ಕ್ಯಾಂಟೀನಿನ ಒಡತಿಯೊಬ್ಬಳು ಅದೆಷ್ಟು ಹೊತ್ತಿಗೊ ಲಿಪ್‌ಸ್ಟಿಕ್, ಬಣ್ಣ ಬಳಿದುಕೊಂಡು ಸಜ್ಜಾಗಿ ಬಂದಿದ್ದಳು!

ಪಶ್ಚಿಮ ಕರಾವಳಿಗರಾದ ನಮಗೆ ಸೂರ್ಯ ದರ್ಶನ 6 ರಿಂದ 7 ಕ್ಕೆ. ಆದರಿಲ್ಲಿ ನಾಲ್ಕಕ್ಕೇ ಬೆಳ್ಳಂ ಬೆಳಗ್ಗೆ. ನಾವಿದ್ದ ಹೋಟೆಲ್‌ನೆದುರಿಗೆ ಹಿಮ ಪರ್ವತವೊಂದು ಬೆಳ್ಳಂ ಬೆಳಗ್ಗೆ ನಾಲ್ಕಕ್ಕೇ ಹಣಕಿ ಹಾಕಿತ್ತು. ಬೆಳಗ್ಗೆ ಮೂರರ ನಂತರ ಯಾರಿಗೂ ನಿದ್ದೆಯೇ ಸರಿಯಾಗಿ ಬಂದಿರಲಿಲ್ಲ. ಎದ್ದು ತಯಾರಾದೆವು.

ಸರೋವರದೆಡೆಗೆ

ಚಹ ಹೀರಿ ಬೆಳಗ್ಗೆ 4 ರ ಹೊತ್ತಿಗೆ ನಮ್ಮನ್ನು ಹೊತ್ತ ಜೀಪ್ ಹೊರಟಿತು. ಹೊರಟ ಎರಡೇ ನಿಮಿಷಕ್ಕೆ ಊರಾಚೆಗಿದ್ದೆವು. ಬೀಜ ಚೆಲ್ಲಿದಲ್ಲಿ ಬೆಳೆವ ಹೂ ಕೋಸಿನ, ಎಲೆಕೋಸಿನ ಹೊಲಗಳನ್ನು ದಾಟಿ ನೂರಾರು ಝರಿಗಳ ಹಾದು ಹೊರಟೆವು. ಹೊರಟ ಕೂಡಲೇ ಸಿಕ್ಕಿದುದು ಎರಡು ಜಲಧಾರೆ ಮತ್ತೊಂದು ಕಬ್ಬಿಣದ ಸೇತುವೆ. ಎಷ್ಟು ಸೇತುವೆ, ಜಲಧಾರೆ ನೋಡಿದೆವೆಂಬುದು ಲೆಕ್ಕವಿಡಲಸದಳ! ನಮ್ಮ ಹೋಟೆಲ್ ಎದುರಿಗೇ ಸುಂದರ ಜಲಪಾತವೊಂದು ಸುರಿಯುತ್ತಿತ್ತು. ಕೆಲವೆಡೆ ಗುಡ್ಡ ಕುಸಿದು ದಾರಿ ಅದಲು ಬದಲಾಗಿತ್ತು.

ಲಾಚೆನ್‌ನಿಂದ ಸ್ವಲ್ಪ ದೂರದಲ್ಲಿಯೇ ಸೈನಿಕರ ಮಕ್ಕಳಿಗಾಗಿ ಶಾಲೆಯೊಂದು ತೆರೆದಿತ್ತು. ಆ ಶಾಲೆ ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ನಡುವೆ ತೀಸ್ತಾ ನದಿಗೆ ಅಣೆಕಟ್ಟು ಕಟ್ಟಿದ್ದರು. ಪ್ರತಿ ಕಿಲೋ ಮೀಟರ್‌ಗೊಂದರಂತೆ ಸೈನಿಕರ ಬಂಕರ್‌ಗಳು, ಪೆಟ್ರೋಲ್ ಬಂಕ್‌ಗಳು, ಶೇಖರಣಾ ತೊಟ್ಟಿಗಳಿದ್ದವು. ಲಾಚೆನ್‌ನಿಂದ 14,000 ಅಡಿ ಎತ್ತರದ ತಾಂಗು ಎಂಬ ತಪಾಸಣಾ ಜಾಗಕ್ಕೆ ಬಂದಿದ್ದೆವು. ಮದ್ರಾಸ್ ರೆಜಿಮೆಂಟ್ ದಾಟಿ ಮುಂದೆ ಸಾಗಿದರೆ ಸೇನಾ ತಪಾಸಣೆ. ನಮ್ಮ ಪರ್ಮೀಟುಗಳ ದಾಖಲೆ ತೋರಿಸಲು ಡ್ರೈವರ್ ಹೋದ. ಮೂರು ನಾಲ್ಕು ಮನೆಯಿರುವ ಊರು ತಾಂಗು. ಮನೆ ಮಾಡಿಗೆ ಶೀಟುಗಳು ಮತ್ತು ಬಳಪದ ಕಲ್ಲುಗಳನ್ನು ಬಳಸಿ ಹೊದಿಸಲಾಗಿತ್ತು.

14,000 ಅಡಿ ಎತ್ತರದಲ್ಲಿ ಕೆಫೆ

ಬೆಳಗ್ಗೆ ಬೇಗ ಎದ್ದಿರುವುದಕ್ಕೋ ಏನೋ 7 ಕ್ಕೇ ಹೊಟ್ಟೆ ಚುರುಗುಡುತ್ತಿತ್ತು. ಕೊರೆವ ಚಳಿಗೆ ಮೈ ಮನಸ್ಸು ಚಹಕ್ಕೆ ಹಾತೊರೆಯುತ್ತಿತ್ತು. ಚಿಕ್ಕ ಗುಡುರಾದೊಳಗೆ ನುಗ್ಗಿದೆವು. ಅಲ್ಲಿದ್ದದ್ದು ಬ್ರೆಡ್ ಜಾಮ್, ಆಮ್ಲೆಟ್. ಮೂರ‍್ನಾಲ್ಕು ದಿನದಿಂದ ಬ್ರೆಡ್ ತಿಂದುಕೊಂಡಿದ್ದ ನಮಗೆ ಮತ್ತೆ ಅದರ ದರ್ಶನ. ಅನಿವಾರ್ಯ. ಪಾಶ್ ಹೋಟೆಲ್‌ನಲ್ಲಿ ಉಳಿದ ಜೋಡಿಯೊಂದು ತಣಿದ ಬ್ರೆಡ್ ತಿನ್ನುವುದು ನಮಗೆ ನಗು ತರಿಸಿತು. ನಾವು ಬಿಸಿ ಬ್ರೆಡ್, ಜಾಮ್, ಆಮ್ಲೇಟ್ಗೆ ಬೇಡಿಕೆ ಇಟ್ಟೆವು. ಬ್ರೆಡ್‌ನ ಪರಮ ವೈರಿಯಾದ ನಾನು ಬ್ರೆಡ್ ತಿನ್ನುತ್ತಿದ್ದುದು ನೋಡಿ ಗೆಳೆಯ ನಾಗರಾಜ ನನ್ನ ಕಾಲೆಳೆಯುತ್ತಿದ್ದ. ಕೊನೆ ಕೊನೆಗೆ ಬ್ರೆಡ್ ಆಮ್ಲೆಟ್ ಎಂದರೆ ವಾಕರಿಕೆ ಬರುವಂತಾಗಿತ್ತು.

ಹೊಟೆಲ್ ಒಡತಿ ಬಂದ ಹತ್ತಾರು ಜನರಿಗೆ ತನ್ನ ಕೆರೊಸಿನ್ ಸ್ಟೌನಲ್ಲಿ ತಿಂಡಿ ಮಾಡಿ ಬಡಿಸುತ್ತಿದ್ದಳು. ದಿನದ ಒಂದೆರಡು ಗಂಟೆಯಷ್ಟೇ ವ್ಯಾಪಾರ. ಉಳಿದ ಸಮಯ ಸೂಟಿ. ಲಾಚೆನಿನವಳಾದ ಈಕೆ ಪರಮ ಸುಂದರಿ. ಅನಿವಾರ್ಯವಾಗಿ ಒಂದೆರಡು ಬ್ರೆಡ್ ಆಮ್ಲೆಟ್ ತಿಂದು ಹೊರಟೆವು.

ದಟ್ಟ ಕಾನನದ ನಡುವೆ ಹುದುಗಿದ್ದ ಲಾಚೆನ್‌ಗೂ ಇಲ್ಲಿನ ಪರಿಸರಕ್ಕೂ ಅಜಗಜಾಂತರ. ಗುಡ್ಡದ ಝರಿಯೇ ಜೀವಸೆಲೆ. ಇಲ್ಲಿನ ಕುರುಚಲು ಕಾಡಿನ ಬೆಟ್ಟಗಳ ಮೇಲ್ಮೈ ವಿಶಿಷ್ಟವಾಗಿದೆ. ಬೆಟ್ಟದ ಬಿಳಿ ಕಾಂಡಗಳ ಪುಟ್ಟ ಮರಗಳು ಬೆಟ್ಟದ ಮೇಲೆ ನೆಟ್ಟ ಕೋಲಿನಂತೆ ಕಾಣುತ್ತವೆ. ಮಾರ್ಚ್‌– ಏಪ್ರಿಲ್ ತಿಂಗಳಿನಲ್ಲಿ ಬೆಟ್ಟವೆಲ್ಲಾ  ವಿಶಿಷ್ಟ ಹೂಗಳಿಂದ ಅಲಂಕರಿಸಿ ಅದ್ಭುತವಾಗಿ ಕಾಣುತ್ತವಂತೆ.

ತಾಂಗುವಿನ ಬಳಿಕ ಸುಮಾರು ಮೂರು ಸಾವಿರ ಅಡಿಗಳ ಎತ್ತರವನ್ನು ದಾಟಿ ಮರುಭೂಮಿಯಂತಹ ಒಣ ಹವೆಗೆ ದಾಟಿಕೊಳ್ಳಬೇಕು. ಸಣ್ಣ ಮೊಟರು ಕಲ್ಲಿನ ಬೆಟ್ಟಗಳ ಸಾಲು. ಅಲ್ಲಲ್ಲಿ ಕಲ್ಲುಗಳು ಋಷಿಗಳಂತೆ ಪೋಜು ಕೊಟ್ಟು ನಿಂತಿದ್ದವು. ಬಿಸಿಲಿಗೆ ಹೊಳೆವ ಬಿಳಿ ಕಲ್ಲುಗಳ ಗುಡ್ಡಗಳು. ಹಿಮನದಿಗಳು ಅಷ್ಟಿಷ್ಟು ಕಲ್ಲುಗಳನ್ನು ತಂದು ದಾರಿಯುದ್ದಕ್ಕೂ ಹರಡಿದ್ದವು. ಬ್ರೆಡ್ಡಿನ ಹಲ್ಲೆಗಳಂತಿರುವ ಕಲ್ಲರಾಶಿಗಳ ಹತ್ತಿಳಿಯುತ್ತಾ ಸಾಗಿತ್ತು ನಮ್ಮ ವಾಹನ. ಶುಷ್ಕಗಾಳಿಯ ಹಾವಳಿ. ಒಂಟಿ ಬಂಕರ್‌ಗಳು, ಬೆಪ್ಪರಂತೆ ಹಸಿರು ಹೊದ್ದ ಬೆಟ್ಟಗಳಲ್ಲಿ ಚೇಳುಗಳಂತೆ ಕಲ್ಲು ಸಂದಿಗಳಲ್ಲಿ ಅವಿತಿದ್ದವು.

ಪರಿಸರದ ಸೌಂದರ್ಯಕ್ಕೆ ಮೋಡಿಗೊಳಗಾದವರಂತೆ ನೋಡತೊಡಗಿದೆವು ನಾವು. ಪ್ರತಿಯೊಬ್ಬರ ಬಾಯಿಯಿಂದ ವಾವ್ ಎಂಬ ಉದ್ಗಾರ. ಮೊದ ಮೊದಲಿಗೆ ಸರ್ಕಸ್ಸಿನಂತಿದ್ದ ದಾರಿ ಈಗ ಬಹಳೇ ಚೆನ್ನಾಗಿತ್ತು. ಇಲ್ಲಿಂದ ಚೀನಾ ಕೇವಲ 15 ಕಿಲೋ ಮೀಟರ್. ಮೊಟರು ಕಲ್ಲಿನ ಬೆಟ್ಟ ದಾಟಿ ಯಾರೋ ಇಸ್ತ್ರಿ ಮಾಡಿಟ್ಟಂತಹ ಕೆಂಬಣ್ಣದ ಬೆಟ್ಟ ಸಾಲು ನಮ್ಮೆದುರಿಗೆ ಬಂದು ನಿಂತಿದ್ದು ಗೊತ್ತೇ ಆಗಲಿಲ್ಲ. ಬೆಟ್ಟದ ಮೇಲೆ ಹಿಮ ಕೊರೆದ ದಾರಿಗಳು ಗೀಟು ಎಳೆದಂತೆ ಕಾಣುತ್ತಿದ್ದವು. ಕೆಂಬಣ್ಣದ ಪರ್ವತದ ಕೆಳಗೆ ಹಸಿರು ಪರ್ವತಗಳು. ಕೆಲವನ್ನು ಕಣ್ತುಂಬಿಕೊಳ್ಳುತ್ತಾ ಕೆಲವನ್ನು ಕ್ಯಾಮೆರಾದಲ್ಲಿ, ಹೀಗೆ ಸಾಗಿತ್ತು ಪ್ರಯಾಣ. ತಾಂಗು ಬಳಿಕ ಜೊತೆಯಾದ ಹಿಮ ಬೆಟ್ಟವೊಂದು ದಾರಿ ಹೇಳುತ್ತಾ ಹಿಂಬಾಲಿಸಿ ಬಂದಿದ್ದು ಸರೋವರ ತಲುಪುವ ಕೊನೆ ಕ್ಷಣದಲ್ಲಿ ಕಣ್ಮರೆಯಾಗಿತ್ತು.

ಇನ್ನೇನು ಸರೋವರಕ್ಕೆ 5 ಕಿಲೋ ಮೀಟರ್ ಇರಬೇಕಾದರೆ ಚಾದರ ಹೊದ್ದಂತಿದ್ದ ಯಾಕ್‌ಗಳು ಯಾತ್ರೆಗೆ ಹೊರಟಂತೆ ನಮಗೆದುರಾದವು. ದೈತ್ಯ ಯಾಕ್‌ಗಳೆದುರು ಧೈರ್ಯಮಾಡಿ ಒಂದೆರಡು ಫೋಟೊ ಕ್ಲಿಕ್ಕಿಸಿದೆ. ಗೆಳೆಯ ನಾಗರಾಜ್ ಜಾಗ್ರತೆ ಹೇಳಿದ. ಇಲ್ಲಿಂದ ಶುರುವಾಯಿತು ನೋಡಿ ನಗಲು, ಮಾತನಾಡಲೂ ಸಾಧ್ಯವಾಗದಂತಹ ಚಳಿ! ಅಂತೂ 9.30ರ ಸುಮಾರಿಗೆ ಪವಿತ್ರ ಸರೋವರದಲ್ಲಿದ್ದೆವು.

ಪವಿತ್ರ ಸರೋವರದಲ್ಲಿ

ಭಾರತದ ಅತಿ ಎತ್ತರದ ಎರಡನೇ ಸರೋವರ. 290 ಎಕರೆಯಷ್ಟು ವಿಸ್ತೀರ್ಣ. ಒಟ್ಟು ಮೂರು ಸರೋವರಗಳ ಗುಚ್ಛ. 5 ಕಿ. ಮೀ ವ್ಯಾಸವಿರುವ ಗುರುದೊಂಗ್ ಮಾರ್. ಹಿಮಗಟ್ಟದೇ ಉಳಿವ ಇದರ ಕೆಲ ಭಾಗಗಳು ವಿಶಿಷ್ಟ. 8ನೇ ಶತಮಾನಕ್ಕೂ ಚಾಚಿಕೊಂಡ ಇದರ ಇತಿಹಾಸ. ಕಡು ನೀಲಿ, ಕಂದು, ಅಲ್ಲಲ್ಲಿ ಬದಲಾಗುವ ನೇರಳೆ ಬಣ್ಣವೋ ಮನಮೋಹಕ. ಹಿಮ ಬೆಟ್ಟದಡಿಯಲ್ಲಿ ತಣ್ಣಗೆ ನಲಿಯುತ್ತಿತ್ತು. ಹಿಮಗಾಳಿಗೆ ಸಣ್ಣ ತೆರೆಗಳೆದ್ದು ಬರುವ ಪರಿ ಅಮೋಘ.

ಸರೋವರದೆದುರಿಗೆ ನಿಂತರೆ ಧನ್ಯತಾ ಭಾವ. ಸ್ವಚ್ಛ ಪರಿಸರ. ಎವರೆಸ್ಟ್ ಬೇಸ್ ಕ್ಯಾಂಪ್‌ನಷ್ಟು ಎತ್ತರ, 17,1000 ಅಡಿ. ಗ್ಲೇಷಿಯರ್‌ನ ಹಿಮಗಾಳಿಗೆ ಶತಮಾನದಿಂದ ಸ್ವಲ್ಪವೂ ಅಂಜದೇ ನಿಂತಿರುವ ಕಾಂಗಚೇನ್ ಪರ್ವತ. ಮಡಿಲಲ್ಲಿ ಸರೋವರ. ಹಿಮಗಾಳಿಗೆ ಮೂಳೆ ಮುರಿವಂತಹ ಚಳಿ. ಪ್ರತಿ ಉಸಿರಿಗೂ ತಿಣುಕುವಂತೆ ಮಾಡುವ ಆಕ್ಸಿಜನ್ ಅಭಾವ. ಎಂತಹ ಗಟ್ಟಿಗರಿಗೂ ಎದೆ ನಡುಕ ಬರದಿರದು.

ಬಲಕ್ಕೆ ಭೂತಾನ್, ಉತ್ತರಕ್ಕೆ ಚೀನಾದ ಗಡಿ. ಎದುರಿಗಿದ್ದ ಹಿಮ ಹೊದ್ದ ಶಿಖರಗಳು ಮೋಡಗಳೊಳಗೆ ನುಸುಳಿ ಬರುತ್ತಿದ್ದವು. ಮೊಗೆದಷ್ಟು ಚಿಮ್ಮುವ ಹಿಮಗಾಳಿ. ಊಸರವಳ್ಳಿಯಂತೆ ಗಳಿಗೆಗೊಂದು ಬಣ್ಣ ಬದಲಾಯಿಸುತ್ತಿತ್ತು. ಸರೋವರದ ಎದುರಿನ ಬೆಟ್ಟಕ್ಕೂ ಇದೇ ಚಾಳಿ ಅಂಟಿಕೊಂಡಿತು. ಸರೋವರ ತಲುಪಿದಾಗ ಕೆಂಪಗಿದ್ದಿದ್ದವು ಸ್ವಲ್ಪ ಹೊತ್ತಿಗೆ ಹಸಿರಾದವು, ಕಪ್ಪಗಿದ್ದ ಕೆಲವು ಹಸಿರಾದವು!

ತಿಳಿ ನೀರ ಸರೋವರದಲ್ಲಿ ಮೀಯುವಾಸೆ. ಪುಸಲಾಯಿಸಿದರೂ ಪುಪ್ಪುಸಗಳು ಮುಷ್ಕರ ಹೂಡಿದ್ದವು. ಅವಿರತವಾಗಿ ಕ್ಯಾಮೆರಾ ತನ್ನ ಕೆಲಸ ಮಾಡುತ್ತಿತ್ತು. ಗಳಿಗೆ ಗಳಿಗೂ ಹಾರಿ ಬರುವ ಹತ್ತಿ ಹಿಂಜಿದಂತಹ ಮೋಡಗಳು ಪ್ರತಿ ಚಿತ್ರಕ್ಕೊಂದು ಕಲಾತ್ಮಕ ಸ್ಪರ್ಶ ನೀಡುತ್ತಿದ್ದವು.

ಒಂದೇ ದಿನ 10,000 ಅಡಿ ಎತ್ತರಕ್ಕೆ!

ವಿಜ್ಞಾನದ ಪ್ರಕಾರ ಒಂದು ದಿನಕ್ಕೆ ಹೆಚ್ಚೆಂದರೆ ಸಾವಿರದಿಂದ ಎರಡು ಸಾವಿರ ಅಡಿಗಳವರೆಗೆ ಏರಬಹುದು. ನಾವು ಬರೋಬ್ಬರಿ 10 ಸಾವಿರ ಅಡಿ ಏರಿದ್ದೆವು. ಎಲ್ಲರಿಗೂ ಸಣ್ಣಗೆ ತಲೆ ತಿರುಗಿದಂತಹ ಅನುಭವ. ಅಲ್ಲಿಗೆ ಬಂದ ಹೆಚ್ಚಿನವರು ಕೂಡಲೇ ಹಿಂದಿರುಗುತ್ತಿದ್ದರು. ಕೆಲವರು ವಾಂತಿ ಮಾಡಿಕೊಳ್ಳುತ್ತಿದ್ದರು.

ಸರೋವರದ ಒಂದು ಸುತ್ತು ಹೊಡೆದು ಬಂದೆವು. ಪವಿತ್ರ ಸರೋವರದ ಪ್ರದಕ್ಷಿಣೆ ಮಾಡಲು ನಾಗರಾಜ ಮತ್ತು ಮಿಲಿಂದ್ ಹೊರಟು ನಿಂತರು. ನಾನು ಮಮತಾ, ಅನುರಾಧ ದಂಡೆಯಲ್ಲಿ ಉಳಿದು ಸರೋವರದ ಸೌಂದರ್ಯ ಸವಿಯುತ್ತಾ ಕುಳಿತೆವು. ಹಲವು ಹಿಮಗುಬ್ಬಿ ಮರಿಗಳು ನಮ್ಮ ಜೊತೆಗಿದ್ದವು. ಸುಂದರ ಮತ್ತೊಂದು ಹಕ್ಕಿಯೂ ನಮಗೆ ಗಿರಕಿ ಹೊಡೆದು ಬರುತ್ತಿತ್ತು.

ಅವರು ಹಿಂದಿರುಗುವಾಗ 12.30 ಆಕ್ಸಿಜನ್ ಅಭಾವಕ್ಕೆ ನಮ್ಮ ಡ್ರೈವರ್‌ ತಲೆ ಗಿರಕಿ ಹೊಡೀತಿತ್ತು. ಆತನಿಗೆ ಚಾ ಕುಡಿಸಿ, ಮ್ಯಾಗಿ ತಿನ್ನಿಸಿ ಸ್ವಲ್ಪ ಸುಧಾರಿಸಿದ ಕೂಡಲೇ ಹೊರಟು ಬಿಟ್ಟೆವು. 17 ಸಾವಿರ ಅಡಿಯಲ್ಲಿ ಗೇಲೇ ಎನ್ನುವ ಸಾಹಸಿಗನಿಲ್ಲಿ ಚಹದಂಗಡಿ ಇಟ್ಟಿದ್ದ. ಚಹ ಒಂದಕ್ಕೆ ರೂ 40. ಮ್ಯಾಗಿಯೊಂದಕ್ಕೆ 70 ರೂಪಾಯಿ. ದೇವಸ್ಥಾನದ ಕಾವಲುಗಾರನಾದ ಈತ ಚೀನಾ ಗಡಿ ಭಾಗದಲ್ಲಿ ರೂಮ್‌ ಮಾಡಿ ವಾಸಕ್ಕಿದ್ದ. ಮತ್ತೊಮ್ಮೆ ಬಂದು ಈತನನ್ನು ಮಾತನಾಡಿಸುವ ಹಂಬಲದೊಂದಿಗೆ ಅಲ್ಲಿಂದ ಹೊರಟು ನಿಂತೆವು. ನಸು ಕಂದು ಬಣ್ಣದಿಂದ ತಿಳಿ ನೀಲಿ ಬಣ್ಣಕ್ಕೆ ತಿರುಗುತ್ತಾ ನಮಗೆಲ್ಲಾ ಬಾಯ್ ಬಾಯ್ ಹೇಳಿತ್ತು. ಅಗಾಧ ಅನುಭವದ ಬುತ್ತಿಯೊಂದು ನಮ್ಮ ಜೊತೆಗಿತ್ತು.

***

ಇತಿಹಾಸ

ಇದರ ಇತಿಹಾಸಕ್ಕೆ ಸುತ್ತು ಹಾಕಿದರೆ 8 ನೇ ಶತಮಾನದ ಕಾಲಕ್ಕೆ ಬಂದು ನಿಲ್ಲುತ್ತೆ. ರಿಂಪೋಚೆ ಯಾ ಪದ್ಮಸಂಭವ, ಟಿಬೆಟಿಯನ್ ಮಹಾಯನ ಸ್ಥಾಪಕನ ಸುತ್ತ ಗಿರಕಿ ಹೊಡೆಯುತ್ತೆ. ಈತ ಟಿಬೆಟಿನಿಂದ ಹಿಂದಿರುಗುವಾಗ ಈ ಸರೋವರದ ಸನಿಹದಲ್ಲಿ ಹಾದು ಹೋಗುತ್ತಾನೆ. ಆತನಲ್ಲಿ ಹಳ್ಳಿಗರು ಬೇಡಿಕೆಯೊಂದನ್ನು ಇಡುತ್ತಾರೆ. ಈಗಿಲ್ಲಿ ಹಳ್ಳಿಯೇ ಇಲ್ಲ ನೆನಪಿರಲಿ. ಸೈನಿಕರ ಬಂಕರ್‌ಗಳು ಜೊತೆಗೆ ತೀಸ್ತಾ ನದಿ ಮಾತ್ರ. ನಮಗೆ ಚಳಿಗಾಲಕ್ಕೆ ಕುಡಿಯಲು ನೀರಿಲ್ಲ, ಎಲ್ಲವೂ ಹಿಮವಾಗುತ್ತದೆ. ಹಾಗಾಗಿ ತಾವು ದಯಮಾಡಿ ಸಹಾಯ ಮಾಡಿ ಎಂದು ಬೇಡುತ್ತಾರೆ.

ಚಳಿಗಾಲದಲ್ಲಿ ಇಲ್ಲಿನ ಉಷ್ಣಾಂಶ –35 ಡಿಗ್ರಿಗೆ ಇಳಿಯುತ್ತೆ. ಉರುವಲಿಲ್ಲದ ತಣ್ಣನೆ ಮರುಭೂಮಿಯ ನಡುವಿರುವ ಸರೋವರದ ಕೆಲಭಾಗಕ್ಕೆ ಗುರು ಪದ್ಮ ಸಂಭವ ತಮ್ಮ ಕೋಲಿನಿಂದ  ಬಾರಿಸುತ್ತಾರೆ. ಆ ಭಾಗ ಹಾಗೇ ಉಳಿದು ಉಳಿದೆಲ್ಲಾ ಭಾಗ ಚಳಿಗಾಲದಲ್ಲಿ ಹೆಪ್ಪುಗಟ್ಟುತ್ತದೆ, ಅದೂ –35 ಡಿಗ್ರಿಯಲ್ಲಿ. ಹಾಗಾಗಿ ಈ ಸರೋವರಕ್ಕೆ ಗುರುದೊಂಗ್ ಮಾರ್ ಎಂಬ ವಿಶಿಷ್ಟ ಹೆಸರು. ಅದರ ಅರ್ಥ ಗುರು ತನ್ನ ಕೋಲಿನಿಂದ ಬಾರಿಸಿದ ಎಂದು. ಇವತ್ತಿಗಿದು ಬೌದ್ಧರ ಪವಿತ್ರ ಸ್ಥಳವಾಗಿ ಗುರುತಿಸಲ್ಪಟ್ಟಿದೆ. ಮಕ್ಕಳಿಲ್ಲದವರು ಬೇಡಿಕೊಂಡರೆ ಮಗುವೆಂಬ ಪ್ರಸಾದವೂ ಆಗುವುದೆಂಬ ಪ್ರತೀತಿಯೂ ಇದೆ. ಇದರ ನೀರನ್ನು ಕೆಲವು ಪ್ರವಾಸಿಗರು ಸಂಗ್ರಹಿಸಿ ಕೊಂಡೊಯ್ಯುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT