ಸದನದಲ್ಲಿ ಚರ್ಚೆ; ಶಿವಪ್ಪ ಅವರಿಗೆ ಮುಖ್ಯಮಂತ್ರಿ ಭರವಸೆ
ಬೆಂಗಳೂರು, ಜುಲೈ 22– ‘ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವಿವಾದಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಬೇಕು’ ಎಂಬ ವಿರೋಧಪಕ್ಷದ ನಾಯಕ ಶ್ರೀ ಶಿವಪ್ಪ ಅವರ ಅಭಿಪ್ರಾಯವನ್ನು ಮುಖ್ಯಮಂತ್ರಿ ನಿಜಲಿಂಗಪ್ಪ ಅವರು ಒಪ್ಪಿಕೊಂಡರು.
‘ರಾಜ್ಯದ ಜನರ ಭಾವನೆಗಳನ್ನು ಕೇಂದ್ರಕ್ಕೆ ಮನವರಿಕೆ ಮಾಡಬೇಕಾದರೆ ಈ ವಿಚಾರವನ್ನು ಅಧಿವೇಶನದಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು’ ಎಂದು ಶ್ರೀ ಶಿವಪ್ಪ ಅವರು ಹೇಳಿದ್ದರು. ಈ ಸಲಹೆಯನ್ನು ಸ್ವೀಕರಿಸಿರುವ ಮುಖ್ಯಮಂತ್ರಿ, ‘ಸರ್ಕಾರ ಈ ಅಭಿಪ್ರಾಯಕ್ಕೆ ಮನ್ನಣೆ ನೀಡಿದೆ’ ಎಂದಿದ್ದಾರೆ.
* ನಾಗಾ ಬಂಡುಕೋರರನ್ನು ಚದುರಿಸಿದ ಯೋಧರು ಇಂಫಾಲ್, ಜುಲೈ 22– ಪೂರ್ವ ಪಾಕಿಸ್ತಾನದೊಳಗೆ ನುಗ್ಗಲು ಪ್ರಯತ್ನಿಸುತ್ತಿದ್ದ ಸುಮಾರು 50ಮಂದಿ ನಾಗಾ ಬಂಡುಕೋರರ ಗುಂಪನ್ನು ರಕ್ಷಣಾ ಪಡೆಗಳ ಯೋಧರು ಗುಂಡು ಹಾರಿಸಿ ಚದುರಿಸಿದ್ದಾರೆ.
ಈ ಗುಂಪು ಜುಲೈ 20ರಂದು ಸಂಜೆ ವೇಳೆಯಲ್ಲಿ ಬರ್ಮಾ ಗಡಿಭಾಗದಲ್ಲಿರುವ ಚಮು ಪ್ರದೇಶದ ಮೂಲಕ ಪೂರ್ವ ಪಾಕಿಸ್ತಾನವನ್ನು ಪ್ರವೇಶಿಸಲು ಪ್ರಯತ್ನಿಸಿತ್ತು.
ರಕ್ಷಣಾಪಡೆಯ ಯೋಧರು ಗುಂಡುಹಾರಿಸಿದ್ದರಿಂದ ಅವರು ಪರಾರಿಯಾಗಿದ್ದಾರೆ. ಬಂಡುಕೋರರಿಂದ ಒಂದು ಸ್ಟೇನ್ಗನ್ ಹಾಗೂ 500 ಸುತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.