ಬೆಂಗಳೂರು: ಸೇಂಟ್ ಜಾನ್ಸ್ ಆಸ್ಪತ್ರೆಯ ವೈದ್ಯರು 100 ವರ್ಷದ ಶ್ರೀನಿವಾಸ್ ಎಂಬುವರಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆಸಿ, ಪೇಸ್ಮೇಕರ್ ಅಳವಡಿಸಿದ್ದಾರೆ.
ಡಾ.ಕಿರಣ್ ವರ್ಗೀಸ್ ಅವರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ. ಸದ್ಯ ಶ್ರೀನಿವಾಸ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
‘ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀನಿವಾಸ್ ಅವರ ಹೃದಯ ನಾಳಗಳಲ್ಲಿ ರಕ್ತ ಸಂಚಾರ ನಿಧಾನವಾಗಿತ್ತು. ಇದರಿಂದ ಅವರ ಹೃದಯ ಬಡಿತವೂ ಕಡಿಮೆಯಾಗಿತ್ತು’ ಡಾ.ಕಿರಣ್ ವರ್ಗೀಸ್ ತಿಳಿಸಿದರು.
‘ಅವರಿಗೆ ತಾತ್ಕಾಲಿಕವಾಗಿ ಬಾಹ್ಯ ಪೇಸ್ಮೇಕರ್ ಅಳವಡಿಸಿದೆವು. ಅವರು ಸಂಪೂರ್ಣವಾಗಿ ಅದನ್ನೇ ಅವಲಂಬಿಸಿದ್ದರು. ಹೀಗಾಗಿ ಅವರ ವಯಸ್ಸನ್ನು ಪರಿಗಣಿಸದೆ, ಜೀವ ಉಳಿಸಲು ಪೇಸ್ಮೇಕರ್ ಶಸ್ತ್ರಚಿಕಿತ್ಸೆ ನಡೆಸಿದೆವು’ ಎಂದು ಹೇಳಿದರು.
‘ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಶತಾಯುಷಿಯೊಬ್ಬರಿಗೆ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದಕ್ಕೂ ಮೊದಲು ಉತ್ತರ ಭಾರತ ಇಬ್ಬರು ಶತಾಯುಷಿಗಳಿಗೆ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ’ ಎಂದರು.