ಕೋಲಾರ: ‘ಅಧ್ಯಯನ ಪ್ರವಾಸಕ್ಕಾಗಿ ಸಿಂಗಪುರಕ್ಕೆ ಹೋಗುತ್ತಿರುವ ನಗರದ ಪೌರ ಕಾರ್ಮಿಕರು ಅಲ್ಲಿನ ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಹಾಗೂ ಸ್ವಚ್ಛತಾ ಕ್ರಮಗಳನ್ನು ತಿಳಿದು ನಗರದಲ್ಲಿ ಅನುಷ್ಠಾನಗೊಳಿಸುವ ಪ್ರಯತ್ನ ಮಾಡಬೇಕು’ ಎಂದು ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ ಕರೆ ನೀಡಿದರು.
ರಾಜ್ಯ ಸರ್ಕಾರವು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಆಯೋಜಿಸಿರುವ ಪ್ರವಾಸಕ್ಕೆ ಆಯ್ಕೆಯಾಗಿರುವ ನಗರದ ಪೌರ ಕಾರ್ಮಿಕರಾದ ವಿ.ನಾರಾಯಣಸ್ವಾಮಿ, ವಿ.ಮೋಹನ್, ವಿ.ವೆಂಕಟೇಶ್ ಮತ್ತು ಸಿ.ಮುನಿಯಪ್ಪ ಅವರನ್ನು ಬೀಳ್ಕೊಡಲು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಿಂಗಪುರದಲ್ಲಿ ಸ್ವಚ್ಛತಾ ವ್ಯವಸ್ಥೆ, ತ್ಯಾಜ್ಯ ನಿರ್ವಹಣೆಗೆ ಅಳವಡಿಸಿಕೊಂ ಡಿರುವ ವೈಜ್ಞಾನಿಕ ವಿಧಾನ ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ. ಪ್ರವಾಸದಿಂದ ಹಿಂದಿರುಗಿದ ಬಳಿಕ ಆ ಮಾಹಿತಿಯನ್ನು ನಗರದ ಇತರೆ ಪೌರ ಕಾರ್ಮಿಕರೊಂದಿಗೆ ವಿನಿಮಯ ಮಾಡಿಕೊಳ್ಳಿ. ನಗರವನ್ನು ಕಸಮುಕ್ತ ನಗರವಾಗಿ ಮಾಡಿ’ ಎಂದು ಕಿವಿಮಾತು ಹೇಳಿದರು.
ನಗರಸಭೆ ಸದಸ್ಯ ಮುರಳಿಗೌಡ ಮಾತನಾಡಿ, ‘ನಗರಸಭಾ ಸದಸ್ಯರೇ ಈವರೆಗೆ ಸಿಂಗಪುರ ನೋಡಿಲ್ಲ, ಪೌರ ಕಾರ್ಮಿಕರಿಗೆ ಸಿಕ್ಕಿರುವ ಈ ಅವಕಾಶ ಸದ್ಬಳಕೆಯಾಗಬೇಕು. ಸ್ವಚ್ಛತೆ ವಿಚಾರದಲ್ಲಿ ನಗರವನ್ನು ಸಿಂಗಪುರ ಮಾದರಿಯಲ್ಲಿ ಬದಲಾವಣೆ ಮಾಡಬೇಕು’ ಎಂದು ಅವರು ತಿಳಿಸಿದರು.