ಬೀಜಿಂಗ್: ತನ್ನ ಭೂಪ್ರದೇಶವನ್ನು ರಕ್ಷಿಸಿಕೊಳ್ಳುವಲ್ಲಿ ಚೀನಾದ ಸೇನೆಗಿರುವ ಸಾಮರ್ಥ್ಯದ ಬಗ್ಗೆ ಭ್ರಮೆಗಳನ್ನು ಬಿತ್ತುವುದು ಬೇಡ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ಸೋಮವಾರ ಭಾರತಕ್ಕೆ ಎಚ್ಚರಿಕೆ ನೀಡಿದೆ. ಸಿಕ್ಕಿಂ ಗಡಿ ವಿವಾದಕ್ಕೆ ಸಂಬಂಧಿಸಿ ಚೀನಾ ಈ ಎಚ್ಚರಿಕೆ ನೀಡಿದೆ.
‘ಪರ್ವತವನ್ನು ಅಲುಗಾಡಿಸುವುದು ಸುಲಭ. ಆದರೆ, ಚೀನಾ ಸೇನೆಯನ್ನು ಅಲುಗಾಡಿಸುವುದು ಕಠಿಣ’ ಎಂದು ರಕ್ಷಣಾ ಸಚಿವಾಲಯದ ವಕ್ತಾರ ವು ಖ್ವಿಯಾನ್ ಹೇಳಿದ್ದಾರೆ. ಚೀನಾದ ಸಾರ್ವಭೌಮತ್ವವನ್ನು ಕಾಪಾಡುವ ಮತ್ತು ಭೂಪ್ರದೇಶವನ್ನು ರಕ್ಷಿಸುವ ಸಾಮರ್ಥ್ಯವನ್ನು ಬಲಯುತಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಡಾಂಗ್ಲಾಂಗ್ ಪ್ರದೇಶದಲ್ಲಿ ಜೂನ್ನಲ್ಲಿ ಭಾರತೀಯ ಸೈನಿಕರು ಗಡಿ ಅತಿಕ್ರಮಣ ಮಾಡಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ ಎಂದು ಚೀನಾ ಆರೋಪಿಸಿದೆ. ಭಾರತ ಮತ್ತು ಭೂತಾನ್ ಆ ಪ್ರದೇಶವನ್ನು ಡೊಕ್ಲಾಂ ಎಂದು ಕರೆಯುತ್ತಿದ್ದು, ಭೂತಾನ್ಗೆ ಸೇರಿದ್ದೆಂದು ಪ್ರತಿಪಾದಿಸಿವೆ.
‘ಉಭಯ ದೇಶಗಳು ವಿವಾದಿತ ಪ್ರದೇಶದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡು ಮಾತುಕತೆ ನಡೆಸಬೇಕು’ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಳೆದ ವಾರ ಹೇಳಿದ್ದರು.