ರಾಮನಗರ: ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ 4 ಮೇಕೆಗಳು ಮೃತಪಟ್ಟು, ದಿನಬಳಕೆಯ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ತಾಲ್ಲೂಕಿನ ಚಿಕ್ಕಸೂಲಿಕೆರೆಯ ಇರುಳಿಗರ ಕಾಲೊನಿಯಲ್ಲಿ ನಡೆದಿದೆ.
ಕಾಲೊನಿಯ ಬೈರಮ್ಮರಂಗಯ್ಯ ಎಂಬುವರಿಗೆ ಸೇರಿದ ಗುಡಿಸಲಿಗೆ ಶುಕ್ರವಾರ ಮಧ್ಯಾಹ್ನ ಬೆಂಕಿ ಬಿದ್ದಿದೆ. ಬೈರಮ್ಮ ಮನೆಯಲ್ಲಿ ಅಡುಗೆ ತಯಾರಿಸುತ್ತಿದ್ದ ವೇಳೆ, ವಿಪರೀತ ಗಾಳಿ ಬೀಸಿದ್ದು, ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ತಗುಲಿದೆ. ಕೂಡಲೇ ಅವರು ಭಯಭೀತರಾಗಿ ಹೊರಗೆ ಓಡಿ ಬಂದರು. ಕ್ಷಣ ಮಾತ್ರದಲ್ಲಿ ಇಡೀ ಮನೆ ಬೆಂಕಿಗೆ ಸಿಲುಕಿ ಸಂಪೂರ್ಣ ಭಸ್ಮವಾಯಿತು.
ಏಕಾಏಕಿ ಸಂಭವಿಸಿದ ಬೆಂಕಿಗೆ ಮನೆಯ ಒಳಗೆ ಇದ್ದ ನಾಲ್ಕು ಮೇಕೆಗಳು ಸಜೀವ ದಹನವಾಗಿದ್ದು, ಎರಡು ಕುರಿ ಮತ್ತು ಒಂದು ಹಸು ಗಾಯಗೊಂಡಿವೆ.
ಮನೆಯಲ್ಲಿಟ್ಟಿದ್ದ ₹5,000 ನಗದು, ಬಟ್ಟೆ, ಪಾತ್ರೆಗಳು, ದವಸ ಧಾನ್ಯ, ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ಬೈರಮ್ಮ ತಿಳಿಸಿದರು.
₹10,000 ನೆರವು, ಸಾಂತ್ವನ
ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎನ್. ಅಶೋಕ್ ಶನಿವಾರ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು. ವೈಯಕ್ತಿಕವಾಗಿ ₹10,000 ಸಹಾಯಧನ ನೀಡಿದರು.
ಪಂಚಾಯಿತಿ ಸದಸ್ಯ ವಿಶ್ವನಾಥ್, ಲಕ್ಷ್ಮೀಪುರ ಪಂಚಾಯಿತಿ ಕಾರ್ಯದರ್ಶಿ ಗೀತಾ, ಮುಖಂಡರಾದ ಶಂಕರಯ್ಯ, ವೆಂಕಟೇಶ್, ನಂಜುಂಡಪ್ಪ, ಮಲ್ಲೇಶ್, ಹುಚ್ಚಪ್ಪ, ಮುತ್ತಯ್ಯ, ಕೃಷ್ಣಪ್ಪ, ರವಿ ಇದ್ದರು.