ದೇವನಹಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 28ರಂದು ದೇವನಹಳ್ಳಿಗೆ ಭೇಟಿ ನೀಡಲಿದ್ದಾರೆ. ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ಅಭಿವೃದ್ಧಿ ಕಾಮಗಾರಿ ಲೋಕಾರ್ಪಣೆ ಮಾಡಲಿದ್ದಾರೆ.
ನಗರದ ಮುಖ್ಯ ರಸ್ತೆ ಅಕ್ಕಪಕ್ಕ ಮಣ್ಣು ತ್ಯಾಜ್ಯ, ಬೆಳೆದಿರುವ ಗಿಡಗಂಟಿಗಳಿಗೆ ಮುಕ್ತಿ ನೀಡಲಾಗುತ್ತಿದೆ. ದೊಡ್ಡ ಹಿರೆಅಮಾನಿ ಕೆರೆ ಏರಿ ಮತ್ತು ಸುತ್ತ ಬೆಳೆದಿರುವ ಗಿಡಗಂಟಿ ತೆರವುಗೊಳಿಸುವ ಪ್ರಯತ್ನ ನಡೆಯುತ್ತಿದೆ.
ಬೆಂಗಳೂರು ನಗರದ ಕೆಲ ಕಡೆಗಳಿಂದ ತ್ಯಾಜ್ಯ ನೀರು ಸಂಸ್ಕರಿಸಿ ಅದನ್ನು ದೇವನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಪೈಪ್ ಮೂಲಕ ಹರಿಸಲಾಗುತ್ತದೆ. ಅದಕ್ಕಾಗಿ ದೇವನಹಳ್ಳಿಯ ದೊಡ್ಡ ಹಿರೆ ಅಮಾನಿಕೆರೆಯಲ್ಲಿ ಗುದ್ದಲಿ ಪೂಜೆ ನಡೆಯಲಿದೆ.
ಕೆರೆ ಬಳಿ ಇರುವ ವೃಕ್ಷೋದ್ಯಾನ ವನದ ಪಕ್ಕದಲ್ಲಿ ಈಗಾಗಗಲೇ ಎರಡು ಜೆಸಿಬಿ ಯಂತ್ರಗಳು ಹಗಲು ರಾತ್ರಿ ಮಣ್ಣು ಸಮ ಮಾಡಿ ಸಿದ್ಧತೆ ಮಾಡುತ್ತಿವೆ. ಬೆಂಗಳೂರು ನಗರದ ಮೇಕ್ರಿ ವೃತ್ತದಿಂದ ದೇವನಹಳ್ಳಿವರೆಗೆ ಸಿಎಂ ಅವರ ಕಟೌಟ್ ಹಾಕಲಾಗುತ್ತಿದೆ.
ಪ್ರವಾಸಿ ಮಂದಿರದಲ್ಲಿ ಭಾನುವಾರ ಮಾತನಾಡಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿಶ್ವನಾಥ, ‘ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರವಾಸಿ ಮಂದಿರದಲ್ಲಿ ನೂತನ ಕಟ್ಟಡ ಕಾಮಗಾರಿ ಸಂಪೂರ್ಣ ಮುಗಿದಿದೆ’ ಎಂದರು.
ಡಾ.ಬಿ.ಆರ್. ಅಂಬೇಡ್ಕರ್ ಕಂಚಿನ ಪ್ರತಿಮೆ ಬಳಿ ತಡೆಗೋಡೆ ಗ್ರಿಲ್ ಕಾಮಗಾರಿ ಮುಗಿದಿದೆ. ಹುಲ್ಲಿನ ಹೊದಿಕೆ ಹಾಕಬೇಕಿದ್ದು, ಒಂದೆರಡು ದಿನದಲ್ಲಿ ಸಣ್ಣಪುಟ್ಟ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.