ದೊಡ್ಡಬಳ್ಳಾಪುರ: ಬಿಜೆಪಿ ವಿಸ್ತಾರಕ್ ಯೋಜನೆ ಅಂಗವಾಗಿ ತಾಲ್ಲೂಕಿನ ಅರಳುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಬಿಜೆಪಿ ಹಿರಿಯ ಮುಖಂಡ ಜೆ.ನರಸಿಂಹಸ್ವಾಮಿ ಮನೆ ಮನೆಗಳಿಗೆ ತೆರಳಿ ಬಿಜೆಪಿ ಜನಪರ ಸಾಧನೆಗಳ ಕರಪತ್ರ ವಿತರಿಸಿ ಪ್ರಚಾರ ನಡೆಸಿದರು.
ಅವರು ಮಾತನಾಡಿ, ರಾಜ್ಯದಲ್ಲಿ ಈ ವರ್ಷವೂ ಮಳೆಯ ಕೊರತೆ ತೀವ್ರವಾಗಿ ಕೊರತೆ ಉಂಟಾಗಿದ್ದು ರೈತರು ಕಂಗಾಲಾಗಿದ್ದಾರೆ. ರೈತರ ನೆರವಿಗಾಗಿಯೇ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಫಸಲ್ ಬಿಮಾ ವಿಮಾ ಯೋಜನೆ ಜಾರಿಗೆ ತಂದಿದೆ. ಎಲ್ಲ ರೈತರು ಬೆಳೆಗಳಿಗೆ ವಿಮೆ ಮಾಡಿಸಬೇಕು. ಬೆಳೆ ವಿಫಲವಾದರೆ ಆರ್ಥಿಕ ನೆರವು ಪಡೆಯಲು ಸಹಕಾರಿಯಾಗಲಿದೆ ಎಂದರು.
ತಾಲ್ಲೂಕಿನಲ್ಲಿ ಇಷ್ಟು ವೇಳೆಗಾಗಲೇ ಬಿತ್ತನೆ ಕಾರ್ಯ ಮುಕ್ತಾಯ ವಾಗಬೇಕಾಗಿತ್ತು. ಆದರೆ ಇನ್ನು ಯಾವುದೇ ಹೋಬಳಿಯಲ್ಲೂ ಬಿತ್ತನೆಯೇ ಆಗಿಲ್ಲ ಎಂದರು.
ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಪರವಾದ ಅಲೆ ಇದೆ. ವಿಸ್ತಾರಕ್ ಸಭೆಗಳಲ್ಲಿ ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ತಾಲ್ಲೂಕಿನ ಪ್ರತಿ ಬೂತ್ಗಳಿಗೂ ಭೇಟಿ ನೀಡಲಾಗುತ್ತಿದೆ ಎಂದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಉಪಾಧ್ಯಕ್ಷ ವೀರಭದ್ರ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನಾಗರಾಜ್, ಖಜಾಂಚಿ ಮರಿಬಸಪ್ಪ, ಬಿಜೆಪಿ ಯುವ ಮುಖಂಡರಾದ ರಘು, ಮಲ್ಲೇಶ್, ಚಂದ್ರಶೇಖರ್, ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್ ಹಾಜರಿದ್ದರು.
*
ರಾಜ್ಯ ಸರ್ಕಾರ ಮೋಡ ಬಿತ್ತನೆ ಯನ್ನು ಈಗಲೇ ಪ್ರಾರಂಭಿಸ ಬೇಕು. ಇದರಿಂದ ಬಿತ್ತನೆಗೆ ಅನುಕೂಲವಾಗಲಿದೆ. ಜೆ.ನರಸಿಂಹಸ್ವಾಮಿ,
ಬಿಜೆಪಿ ಹಿರಿಯ ಮುಖಂಡ