ಬೆಂಗಳೂರು: ‘ಬೆಂಗಳೂರು ಐ.ಟಿ ಬಿಝ್ ಮತ್ತು ಇಂಡಿಯಾ ಬಯೊ 2017’ ಅನ್ನು ನವೆಂಬರ್ 16 ರಿಂದ 18 ರವರೆಗೆ ನಗರದ ಅರಮನೆ ಆವರಣದಲ್ಲಿ ನಡೆಸಲಾಗುವುದು’ ಎಂದು ರಾಜ್ಯ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಬಾರಿ ಕೌಶಲ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇವೆ. ‘ಕಲ್ಪಿಸಿ, ನವೀಕರಿಸಿ ಮತ್ತು ಸಂಶೋಧಿಸಿ’ ಎಂಬ ಹೆಸರಿನಲ್ಲಿ ಸಮಾವೇಶ ನಡೆಯಲಿದೆ’ ಎಂದರು.
‘ಈ ಬಾರಿ 300 ಪ್ರದರ್ಶಕರು ತಮ್ಮ ಉತ್ಪನ್ನ ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಲಿದ್ದಾರೆ. 10,000 ವಾಣಿಜ್ಯೋದ್ಯಮಿಗಳು ಭೇಟಿ ನೀಡುವ ನಿರೀಕ್ಷೆ ಇದೆ.
‘ಮಾಹಿತಿ ತಂತ್ರಜ್ಞಾನ ಸಮಾವೇಶದಲ್ಲಿ ಕ್ಲೌಡ್, ಬಿಗ್ ಡೇಟಾ, ವೈಮಾನಿಕ, ರಕ್ಷಣೆ, ದೂರ ಸಂಪರ್ಕ, ಎಲೆಕ್ಟ್ರಾನಿಕ್ಸ್, ಸೈಬರ್ ಸೆಕ್ಯುರಿಟಿ, ಎವಿಜಿಸಿ, ರೋಬಾಟಿಕ್ಸ್, ಬ್ಲಾಕ್ಚೈನ್ ಮುಂತಾದವುಗಳ ಬಗ್ಗೆ ವಿಚಾರಗೋಷ್ಠಿಗಳು ನಡೆಯಲಿವೆ’ ಎಂದರು.
ಬಯೊಕಾನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮಜುಮ್ದಾರ್ ಷಾ ಮಾತನಾಡಿ, ‘ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ಇತ್ತೀಚಿನ ಆವಿಷ್ಕಾರಗಳ ಪ್ರದರ್ಶನವೂ ಇರಲಿದೆ’ ಎಂದರು.