ಬಳ್ಳಾರಿ: ಪ್ರೊ.ಯು.ಆರ್.ರಾವ್ ಅವರ ತಂದೆ ಲಕ್ಷ್ಮಿನಾರಾಯಣ ಆಚಾರ್ಯ ಬಾಣಸಿಗರು. ಬಡತನವನ್ನೇ ಹಾಸಿ ಹೊದ್ದ ಕುಟುಂಬದಲ್ಲಿ ಉನ್ನತ ವ್ಯಾಸಂಗ ಕನಸಿನ ಮಾತು ಎಂಬ ಪರಿಸ್ಥಿತಿ ಇರುವಾಗಲೇ ಅವರು ವಾರಾನ್ನವನ್ನು ನೆಚ್ಚಿಕೊಂಡು ಪಟ್ಟುಬಿಡದೆ ಓದಿದರು. ಅವರ ವ್ಯಾಸಂಗಕ್ಕೆ ಬಳ್ಳಾರಿಯೂ ಆಶ್ರಯ ನೀಡಿದ್ದು ವಿಶೇಷ.
ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿದ್ದ, ಏಕೀಕರಣಕ್ಕೆ ಮುಂಚಿನ ಹಳೇ ಬಳ್ಳಾರಿ ನಗರದ ಪ್ರಸಿದ್ಧ ವಾರ್ಡ್ಲಾ ಶಾಲೆಯಲ್ಲಿ ಅವರು ಮೂರು ಮತ್ತು ನಾಲ್ಕನೇ ತರಗತಿಯನ್ನು ವ್ಯಾಸಂಗ ಮಾಡಿದ್ದರು. ನಂತರದ ವಿದ್ಯಾಭ್ಯಾಸಕ್ಕೆಂದು ಉಡುಪಿಗೆ ತೆರಳಿದ್ದರು.
ಅಲ್ಲಿಂದ ಇಂಟರ್ಮೀಡಿಯೇಟ್ಗಾಗಿ ಮಂಗಳೂರಿಗೆ ತೆರಳುವುದು ದುಬಾರಿ ಬಾಬತ್ತಿನ ವಿಚಾರವಾಗಿದ್ದರಿಂದ ಮತ್ತೆ ಬಳ್ಳಾರಿಗೆ ಬಂದು ವೀರಶೈವ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದರು.
ಅನಂತಪುರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ರಾವ್ ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿ ಪಡೆದಿದ್ದರು.
ಬಳ್ಳಾರಿಯೊಂದಿಗಿನ ಈ ಶೈಕ್ಷಣಿಕ ನಂಟನ್ನು ಅವರು ತಮ್ಮ ಜೀವನದ ಕೊನೆಯವರೆಗೂ ಕಾಪಾಡಿಕೊಂಡು ಬಂದಿದ್ದರು.
ಖುಷಿಪಟ್ಟಿದ್ದರು: ‘2015ರಲ್ಲಿ ವೀರಶೈವ ಕಾಲೇಜಿಗೆ ಪ್ರೊ ರಾವ್ ಭೇಟಿ ನೀಡಿದ್ದ ವೇಳೆ ಅವರ ದಾಖಲಾತಿ ರಿಜಿಸ್ಟರ್ ಅನ್ನು ತೋರಿಸಿದ್ದೆವು. ಅದನ್ನು ಕೆಲ ಕ್ಷಣ ತದೇಕ ಚಿತ್ತರಾಗಿ ನೋಡಿದ್ದ ಅವರು ಅಪಾರ ಸಂತಸವನ್ನು ವ್ಯಕ್ತಪಡಿಸಿದ್ದರು’ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಅಂದಿನ ಕಾರ್ಯದರ್ಶಿ ರುದ್ರಗೌಡ ಸ್ಮರಿಸಿದರು.