ದೊಡ್ಡಬಳ್ಳಾಪುರ: ಸರ್ಕಾರ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಹಣವನ್ನು ಸಾಲಮನ್ನಾ ಮೊದಲಾದ ಇತರೆ ಯೋಜನೆಗಳಿಗೆ ಉಪಯೋಗಿಸಲು ಉದ್ದೇಶಿಸಿರುವ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಬೇಕು. ಕೂಲಿ ಕಾರ್ಮಿಕರ ಶ್ರೇಯೋಭಿವೃದ್ದಿಗಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನೆಲದಾಂಜನೇಯ ಸ್ವಾಮಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮೇಸ್ತ್ರಿಗಳ ಸಂಘದ ವತಿಯಿಂದ ತಾಲ್ಲೂಕು ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಂಘದ ಕಾರ್ಯದರ್ಶಿ ಎಚ್.ಕೆ.ಆನಂದ್ ಮಾತನಾಡಿ, ಶೇ 1ರಷ್ಟು ಸೆಸ್ ರೂಪದಲ್ಲಿ ಸಂಗ್ರಹವಾಗುತ್ತಿರುವ ಕಟ್ಟಡ ಕೂಲಿ ಕಾರ್ಮಿಕರ ಹಣದ ಮೇಲೆ ಸರ್ಕಾರ ಕಣ್ಣಾಕಿದೆ. ರಾಜ್ಯದಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ 10.74 ಲಕ್ಷ ಕಾರ್ಮಿಕರಿದ್ದಾರೆ.
21 ಜಿಲ್ಲೆಗಳಲ್ಲಿ ಸಂಘಟನೆಗಳು ಸಕ್ರಿಯವಾಗಿದ್ದರೂ ಇಚ್ಛಾಸಕ್ತಿ ಇಲ್ಲದ ಅಧಿಕಾರಿಗಳು ಮತ್ತು ರಾಜಕಾರಣಿಗಳಿಂದ ಕಾರ್ಮಿಕ ಫಲಾನುಭವಿಗಳಿಗೆ ಸಿಗಬೇಕಾದ ಸೌಲಭ್ಯಗಳು ಮರೀಚಿಕೆಯಾಗಿಯೇ ಉಳಿದಿವೆ ಎಂದು ದೂರಿದರು.
ದೇಶದಲ್ಲಿ ಸುಮಾರು 32 ಸಾವಿರ ಕೋಟಿ ರೂಪಾಯಿ ಸೆಸ್ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿದೆ. ರಾಜ್ಯದಲ್ಲಿ ಹಣವಿದ್ದರೂ ಅದನ್ನು ಸರಿಯಾಗಿ ಬಳಸುತ್ತಿಲ್ಲ ಎಂದರು.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವಂತೆ ಕಾರ್ಮಿಕರಿಗಾಗಿ ಸೀಮಿತವಾಗಿರುವ ಹಣವನ್ನು ರೈತರ ಸಾಲ ಮನ್ನಾ ಮಾಡಲು ಹೊರಟಿರುವುದು ಖಂಡನೀಯ ಎಂದರು.
ಸಂಘದ ಅಧ್ಯಕ್ಷ ಟೈಲ್ಸ್ ಕೃಷ್ಟಪ್ಪ ಮಾತನಾಡಿ, ಕಾರ್ಮಿಕ ಫಲಾನುಭಾವಿಗಳಿಗೆ 11 ವಿವಿಧ ರೀತಿಯ ಸೌಲಭ್ಯಗಳು ಶೇ 11ರಷ್ಟು ಮಾತ್ರ ತಲುಪಿಸಿದೆ. ಕಟ್ಟಡ ಕಾರ್ಮಿಕರ ಫೆಡರೇಷನ್ ಕೂಡ ಉಗ್ರ ಹೋರಾಟಕ್ಕೆ ಮುಂದಾಗಿದೆ ಎಂದು ಎಚ್ಚರಿಸಿದರು.