ಮೂಲ್ಕಿ: ಇಲ್ಲಿನ ಮೂಲ್ಕಿ ಬಳಿಯ ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದ ಗುಡ್ಡ ಕುಸಿತದಿಂದ ಶಿಥಿಲಗೊಂಡಿದ್ದ ಕುಡಿಯುವ ನೀರಿನ ಟಾಂಕ್ ಮಂಗಳವಾರ ನೆಲಸಮಗೊಂಡಿದೆ. ಪಡುಪಣಂಬೂರು ಸರ್ಕಾರಿ ಶಾಲೆಯ ಬಳಿ ಇರುವ ₹50 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್, ನೀರು ಶೇಖರಣೆಯ ಸಂಪು ಜತೆಗೆ ಶಾಲಾ ಕೊಠಡಿಯ ತೆರವುಗೊಳಿಸಲು ನವಯುಗ್ ಕನ್ಸ್ಸ್ಟ್ರಕ್ಷನ್ ಸಿಬ್ಬಂದಿ ಕಾರ್ಯಚರಣೆ ನಡೆಸುತ್ತಿದ್ದಾರೆ.
ಗ್ರಾಮದ ಸುಮಾರು 400 ಮನೆ ಗಳಿಗೆ ನೀರು ಸರಬರಾಜು ಮಾಡುತ್ತಿದ್ದ ಟ್ಯಾಂಕ್ ಅನ್ನು ನೆಲಸಮಗೊಳಿಸಿದ್ದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಆಗಿದೆ. ನೀರು ಸರಬರಾಜಿಗೆ ಪರ್ಯಾಯ ವ್ಯವಸ್ಥೆ ಮಾಡಲು ಪಂಚಾಯಿತಿ ಕ್ರಮ ಕೈಗೊಳ್ಳ ಲಿದೆ ಎಂದು ಎಂದು ಪಂಚಾಯಿತಿ ಅಧ್ಯಕ್ಷ ಮೋಹನ್ದಾಸ್ ಪ್ರತಿಕ್ರಿಯಿಸಿದ್ದಾರೆ.
ಶಾಸಕ ಅಭಯಚಂದ್ರ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿ, ಗುಡ್ಡ ಕುಸಿತಕ್ಕೆ ಹೆದ್ದಾರಿ ಇಲಾಖೆಯ ಅಧಿಕಾರಿಗಳೇ ಹೊಣೆ. ಅವೈಜ್ಞಾನಿಕ ಕಾಮಗಾರಿ ನಡೆಸಿದ್ದು, ಸ್ಥಳ ಒತ್ತುವರಿ ಯಾದರೂ ಕ್ರಮ ಕೈಗೊಳ್ಳದಿ ದ್ದರಿಂದ ಈ ಘಟನೆ ನಡೆದಿದೆ. ನೀರಿನ ಸಮಸ್ಯೆಗೆ ಕೂಡಲೆ ಸ್ಪಂದಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಹೇಳಿದರು.
ಜಿ.ಪಂ ಸದಸ್ಯ ವಿನೋದ್ ಬೊಳ್ಳೂರು, ಎಂಜಿನಿಯರ್ ಪ್ರಭಾಕರ್, ಪ್ರಶಾಂತ್ ಆಳ್ವಾ, ಮೂಲ್ಕಿ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರು, ಮೂಡಾ ಸದಸ್ಯ ಎಚ್.ವಸಂತ ಬೆರ್ನಾಡ್ , ಪಂಚಾಯಿತಿ ಸದಸ್ಯರಾದ ವಿನೋದ್ ಸಾಲ್ಯಾನ್ ಬೆಳ್ಳಾಯರು, ಉಮೇಶ್ ಪೂಜಾರಿ, ಪಿಡಿಒ ಅನಿತಾ ಕ್ಯಾಥರಿನ್, ಕಾರ್ಯದರ್ಶಿ ಲೋಕನಾಥ ಭಂಡಾರಿ, ಗ್ರಾಮ ಕರಣಿಕ ಮೋಹನ್, ಮೂಲ್ಕಿ ಅರಮನೆಯ ಗೌತಮ್ ಜೈನ್, ಶಾಲಾ ಸಿಆರ್ಪಿ ಕುಸುಮಾ, ಮುಖ್ಯ ಶಿಕ್ಷಕಿ ರತಿ ಎಕ್ಕಾರು ಭೇಟಿ ನೀಡಿದ್ದಾರೆ.
ಅಪಘಾತದಲ್ಲಿ ಸಾವು: ಗುಡ್ಡ ಕುಸಿದ ಸಂದರ್ಭ ಹೆದ್ದಾರಿಯನ್ನು ಒಂದು ಭಾಗದಲ್ಲಿ ಸಂಪೂರ್ಣವಾಗಿ ಬಂದ್ ಮಾಡಿದ್ದರಿಂದ ಸಂಚಾರದಲ್ಲಿ ಒತ್ತಡ ಹೆಚ್ಚಾಗಿದ್ದರಿಂದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಕಲ್ಲಾಪು ನಿವಾಸಿ ರಾಘವೇಂದ್ರ (43) ಮೃತಪಟ್ಟವರು. ಇವರ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.