ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಹುಲ್ ಜೊಹ್ರಿ ಅವರಿಗೆ ಬುಧವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವ ಅವಕಾಶ ನೀಡಲಿಲ್ಲ.
ಸಭೆಯಲ್ಲಿ ಬಿಸಿಸಿಐ ಮತ್ತು ರಾಜ್ಯ ಸಂಸ್ಥೆಗಳ ಪದಾಧಿಕಾರಿಗಳು ಮಾತ್ರ ಹಾಜರಿರಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದರಿಂದ ಸಿಇಒಗೆ ಅವಕಾಶ ನೀಡಿರಲಿಲ್ಲ.
ಪಂಜಾಬ್ ಮತ್ತು ಒಡಿಶಾ ರಾಜ್ಯ ಸಂಸ್ಥೆಗಳ ಪ್ರತಿನಿಧಿಗಳು ತಾವು ಪ್ರತಿನಿಧಿಸುವ ಸಂಸ್ಥೆಗಳ ಪದಾಧಿಕಾರಿಗಳಾಗಿರಲಿಲ್ಲ. ಆದ್ದರಿಂದ ಅವರಿಗೂ ಸಭೆಯಲ್ಲಿ ಭಾಗವಹಿಸುವ ಅವಕಾಶ ನೀಡಿರಲಿಲ್ಲ.
‘ಜೊಹ್ಲಿ ಅವರು ಬಿಸಿಸಿಐ ಪದಾಧಿಕಾರಿಯಲ್ಲ. ಅವರು ಮಂಡಳಿಯಲ್ಲಿ ಸಂಬಳ ಪಡೆಯುವ ಉದ್ಯೋಗಿಯಾಗಿದ್ದಾರೆ. ಸುಪ್ರೀಂ ಕೋರ್ಟ್ನ ಸ್ಪಷ್ಟ ನಿರ್ದೇಶನವನ್ನು ನಾವು ಪಾಲಿಸಿದ್ದೇವೆ. ಸಭೆಗೆ ಬಂದಿದ್ದ ಪದಾಧಿಕಾರಿಗಳಲ್ಲದ ನೌಕರರಿಗೆ ಹೊರನಡೆಯುವಂತೆ ಹಂಗಾಮಿ ಕಾರ್ಯದರ್ಶಿ ತಿಳಿಸಿದರು’ ಎಂದು ಮೂಲಗಳು ತಿಳಿಸಿವೆ.