ಬೆಂಗಳೂರು: ‘ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂದಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾಗೆ ವಿಶೇಷ ಆತಿಥ್ಯ ನೀಡಲು ₹2 ಕೋಟಿ ಲಂಚ ಪಡೆಯಲಾಗಿದೆ’ ಎಂದು ಆರೋಪಿಸಿದ್ದ ಡಿಐಜಿ ಡಿ.ರೂಪಾ ಅವರಿಗೆ ಡಿಜಿಪಿ ಎಚ್.ಎನ್. ಸತ್ಯನಾರಾಯಣರಾವ್ ಪರ ವಕೀಲರು ನೋಟಿಸ್ ನೀಡಿದ್ದಾರೆ.
‘ನೋಟಿಸ್ ತಲುಪಿದ ಮೂರು ದಿನಗಳೊಳಗೆ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ, ನಿಮ್ಮ (ರೂಪಾ) ವಿರುದ್ಧ ₹50 ಕೋಟಿ ಮೌಲ್ಯದ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು’ ಎಂದು ವಕೀಲ ಪುತ್ತಿಗೆ ಆರ್. ರಮೇಶ್ ನೋಟಿಸ್ನಲ್ಲಿ ಉಲ್ಲೇಖಿಸಿದ್ದಾರೆ.
‘2017ರ ಜುಲೈ 12ರಂದು ನೀವು ಮಾಡಿದ್ದ ಆರೋಪ ರಾಜ್ಯ, ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಆಗಿದೆ. ಅದರ ಬಳಿಕವೂ ನೀವು ಆರೋಪ ಮಾಡುತ್ತಲೇ ಇದ್ದೀರಿ. ಇದರಿಂದ ಇಲಾಖೆಯ ಉನ್ನತ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ನನ್ನ ಕಕ್ಷಿದಾರರ (ಸತ್ಯನಾರಾಯಣ ರಾವ್) ಗೌರವ, ಘನತೆಗೆ ಧಕ್ಕೆ ಉಂಟಾಗಿದೆ’ ಎಂದು ಅವರು ತಿಳಿಸಿದ್ದಾರೆ.