ಸಂಡೂರು: ಕಟ್ಟಡ ನಿರ್ಮಾಣ ಕಾರ್ಮಿ ಕರ ಮಂಡಳಿಯಿಂದ ಕಾರ್ಮಿಕರಿಗೆ ಸಕಾಲದಲ್ಲಿ ಸೌಲಭ್ಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಂಡೂರು ತಾಲ್ಲೂಕು ಘಟಕದ ಮುಖಂಡರು ಬುಧವಾರ ಸಂಡೂರಿನಲ್ಲಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಫೆಡರೇಷನ್ ಜಿಲ್ಲಾ ಉಪಾಧ್ಯಕ್ಷ ವಿ. ದೇವಣ್ಣ, ಕಾರ್ಯದರ್ಶಿ ಎನ್. ನಿಂಗಪ್ಪ, ಮುಖಂಡರಾದ ಕೆ. ಸಿದ್ದಪ್ಪ, ಎಸ್. ಕಾಲುಬಾ ಮಾತನಾಡಿ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸುಮಾರು 11 ಲಕ್ಷ ಕಾರ್ಮಿಕರು ನೋಂದಣಿ ಆಗಿದ್ದಾರೆ. ಸೆಸ್ ಮತ್ತು ನೋಂದಣಿ ಮೂಲಕ ₹5650 ಕೋಟಿ ಹಣ ಮಂಡಳಿಯಲ್ಲಿ ಸಂಗ್ರಹವಾಗಿದೆ.
ಆದರೆ ಕಳೆದ 11 ವರ್ಷದಲ್ಲಿ ಕಾರ್ಮಿಕರ ಸೌಲಭ್ಯಗಳಿಗಾಗಿ ಕೇವಲ ₹177 ಕೋಟಿ ಮಾತ್ರ ಖರ್ಚು ಮಾಡಲಾಗಿದೆ. ಇದಕ್ಕೆ ಅಧಿಕಾರಿಗಳ ಮತ್ತು ಸರ್ಕಾರದ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂದು ದೂರಿದರು. ಮಂಡಳಿಯಿಂದ ಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳು ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ದೊರೆಯಬೇಕು.
ಲಾನುಭವಿಗಳಿಗೆ ಸಲಕರಣೆ, ಸಹಾಯಧನ ಕೊಡಲು ಇರುವ ತರಬೇತಿಯನ್ನು ರದ್ದುಗೊಳಿಸಿ, ಸೌಲಭ್ಯ ನೀಡಬೇಕು. ಪರಿಶೀಲನೆ ನೆಪದಲ್ಲಿ ಕಾರ್ಮಿಕ ನಿರೀಕ್ಷಕರು ಮತ್ತು ಸಿಬ್ಬಂದಿಗಳಿಂದ ಆಗುತ್ತಿರುವ ಭ್ರಷ್ಟಾ ಚಾರಕ್ಕೆ ಕಡಿವಾಣ ಹಾಕಬೇಕು, ಮನೆ ಖರೀದಿ ಅಥವಾ ನಿರ್ಮಾಣಕ್ಕೆ ಫಲಾನು ಭವಿಗೆ ಸಹಾಯಧನ ನೀಡುವುದು ಮತ್ತು ಹೆಚ್ಚುವರಿ ಬಡ್ಡಿಯನ್ನು ಮಂಡಳಿ ಯಿಂದ ಭರಿಸಲು ಕ್ರಮ ಕೈಗೊಳ್ಳಬೇಖು ಎಂದು ಒತ್ತಾಯಿಸಿದರು.
ಫೆಡರೇಷನ್ ತಾಲ್ಲೂಕು ಘಟಕದ ಮುಖಂಡರಾದ ಯು. ತಿಪ್ಪೇಸ್ವಾಮಿ, ಎ.ಸ್ವಾಮಿ, ವಿ. ಬಾಬಯ್ಯ, ಎಚ್. ಮದಗಪ್ಪ, ಕೆ. ದೇವಣ್ಣ, ಕೆ. ಮೆಹಬೂಬ್, ಎಸ್. ನಾಗಪ್ಪ, ಎನ್. ವೆಂಕಟೇಶ್, ಕೆ. ಹೊನ್ನೂರಸ್ವಾಮಿ, ಯರಿಸ್ವಾಮಿ, ಮಾಬುಸಾಬ್, ವಿ. ವೀರೇಶ್, ಯು. ಗೋಪಾಲ ಉಪಸ್ಥಿತರಿದ್ದರು.