ತುಮಕೂರು: ಕಟ್ಟಡ ಕಾರ್ಮಿಕರ ಸಮಸ್ಯೆಗಳ ಪರಿಹಾರ ಮತ್ತು ಕಲ್ಯಾಣ ಮಂಡಳಿ ನಿಧಿಯನ್ನು ಜಿಲ್ಲಾ ಮಟ್ಟದ ಬ್ಯಾಂಕುಗಳಲ್ಲಿ ಠೇವಣಿ ಇಡಬಾರದು ಎಂದು ಬುಧವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ಸಿಐಟಿಯು ಸಂಯೋಜಿತ) ಜಿಲ್ಲಾ ಸಮಿತಿ ಶಾಸಕ ಡಾ.ರಫೀಕ್ ಅಹಮ್ಮದ್ ಅವರಿಗೆ ಮನವಿ ಸಲ್ಲಿಸಿ ಸರ್ಕಾರಕ್ಕೆ ಒತ್ತಾಯಿಸಿತು.
ನಗರದ ಬಿಜಿಎಸ್ ವೃತ್ತದಿಂದ ಶಾಸಕರ ನಿವಾಸದವರೆಗೂ ರ್ಯಾಲಿಯಲ್ಲಿ ತೆರಳಿದ ಕಟ್ಟಡ ಕಾರ್ಮಿಕರು, ಸಂಘಟನೆ ಮುಖಂಡರು ತೆರಳಿ ಮನವಿ ಮಾಡಿದರು.
ಸುಪ್ರೀಂ ಕೋರ್ಟ್ ಆದೇಶ ಮೀರಿ ರಾಜ್ಯ ಸರ್ಕಾರವು ವರ್ತಿಸುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಂದ ಯಾವುದೇ ಕಾರಣಕ್ಕೂ ಜಿಲ್ಲಾ ಮಟ್ಟದ ಬ್ಯಾಂಕುಗಳಿಗೆ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ನಿಧಿ ಇಡಬಾರದು ಎಂದು ಎಂದು ಸಂಘಟನೆ ಮುಖಂಡರು ಒತ್ತಾಯ ಮಾಡಿದರು.
ರಾಜ್ಯ ಉಪಾಧ್ಯಕ್ಷ ಬಿ.ಉಮೇಶ್ ಮಾತನಾಡಿ, ‘ಕಲ್ಯಾಣ ಮಂಡಳಿಯು ಕಟ್ಟಡ ಕಾರ್ಮಿಕರ ನೋಂದಾಯಿತ ಫಲಾನುಭವಿಗಳಿಗೆ ಸೌಲಭ್ಯಗಳನ್ನು ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ. ಅಗತ್ಯ ಸಿಬ್ಬಂದಿ ನೇಮಕ ಮಾಡಿಲ್ಲ. ನೋಂದಣಿ ನವೀಕರಣದಲ್ಲಿ ಕಾರ್ಮಿಕರು ಅಲೆಯುವಂತಾಗಿದೆ’ ಎಂದರು.
‘ಮಂಡಳಿಯ 11 ಸೌಲಭ್ಯಗಳನ್ನು ತ್ವರಿತವಾಗಿ ನೀಡದೆ ಬೇರೆ ಬೇರೆ ಸೌಲಭ್ಯಗಳ ಹೆಸರಿನಲ್ಲಿ ದುಂದುವೆಚ್ಚ ಮಾಡಲು ಮುಂದಾಗಿರುವುದು ಸರಿಯಲ್ಲ. ಮುಖ್ಯಮಂತ್ರಿ ಮಧ್ಯಪ್ರವೇಶ ಮಾಡಬೇಕು. ಬಜೆಟ್ನಲ್ಲಿ ಘೋಷಿಸಿರುವ ಭವಿಷ್ಯ ನಿಧಿ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಮತ್ತು ಕಲ್ಯಾಣ ಮಂಡಳಿಯ ಕಾರ್ಮಿಕ ವಿರೋಧಿ ನೀತಿಗಳನ್ನು ತಡೆಯಬೇಕು’ ಎಂದು ಒತ್ತಾಯಿಸಿದರು.
ರಾಜ್ಯ ಸಹಕಾರ್ಯದರ್ಶಿ ಶ್ರೀಧರ್ ಮಾತನಾಡಿ, ‘ಅನಕ್ಷರಸ್ಥರಾಗಿರುವ ಕಟ್ಟಡ ಕಾರ್ಮಿಕರ ಬದುಕಿನ ಉಳಿವಿಗಾಗಿ ಸರ್ಕಾರ ವಸತಿ ಯೋಜನೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು. ತುಮಕೂರು ತಾಲೂಕು ಘಟಕದ ಕಾರ್ಯದರ್ಶಿ ರಾಮಚಂದ್ರ ಮಾತನಾಡಿದರು.
ಶಾಸಕರ ಭರವಸೆ: ಮನವಿ ಸ್ವೀಕರಿಸಿದ ಶಾಸಕ ರಫೀಕ್,‘ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ಮುಖಂಡರಾದ ಬೆಟ್ಟಪ್ಪ, ಜಯರಾಮಯ್ಯ, ಇಬ್ರಾಹಿಂ ಖಲೀಲ್, ಲಕ್ಷ್ಮಣ್, ಮಲ್ಲೇಶಯ್ಯ, ರಾಮಣ್ಣ, ಜಯಮ್ಮ, ಸರೋಜಮ್ಮ , ಟಿ.ಎಂ. ಗೋವಿಂದರಾಜು, ಶಂಕರಪ್ಪ, ಗಂಗಾಧರ್, ಶ್ರೀಧರ್, ಟಿ.ಎಚ್. ರಾಮು, ಲಕ್ಷ್ಮಣ್, ದೇವರಾಜು, ವಿಶ್ವನಾಥ್, ತಿಪ್ಪೇಸ್ವಾಮಿ, ಮಂಜುನಾಥ್, ಮಕ್ಸೂದ್ ಅಹಮ್ಮದ್,ಹೇಮಾವತಿ, ಗಂಗಮ್ಮ, ಶಂಕರಮ್ಮ ಇದ್ದರು.
ಯೋಧರಿಗೆ ಶ್ರದ್ಧಾಂಜಲಿ: ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಗಡಿಯಲ್ಲಿ ಜೀವದ ಹಂಗನ್ನು ತೊರೆದು ದೇಶ ರಕ್ಷಣೆ ಮಾಡಿ ಹುತಾತ್ಮರ ತ್ಯಾಗವನ್ನು ಸ್ಮರಿಸಲಾಯಿತು.
ನಿಧಿ ಮೇಲೆ ಸರ್ಕಾರದ ಕಣ್ಣು
‘ಬಾಕಿ ಸೌಲಭ್ಯಗಳನ್ನು ಇತ್ಯರ್ಥಪಡಿಸಲು ಮುತುವರ್ಜಿ ವಹಿಸದೆ ಸರ್ಕಾರವು ನನೆಗುದಿಗೆ ಬೀಳಿಸಿದೆ. ಇತ್ತೀಚೆಗೆ ಕಲ್ಯಾಣ ಮಂಡಳಿಯಲ್ಲಿ ಜಮಾಗೊಂಡಿರುವ ನಿಧಿಯನ್ನು ರಾಜ್ಯ ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ಇಡಲು ಪ್ರಯತ್ನಿಸುತ್ತಿದೆ’ ಎಂದು ಮುಖಂಡರಾದ ಬಿ. ಉಮೇಶ್ ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.