ನವದೆಹಲಿ: ಅಸ್ಸಾಂ, ಅರುಣಾಚಲ ಪ್ರದೇಶ, ಈಶಾನ್ಯ ಗುಜರಾತ್ ಸೇರಿದಂತೆ ಹಲವೆಡೆ ಉಂಟಾದ ಪ್ರವಾಹದಿಂದ ಸುಮಾರು 600 ಮಂದಿ ಸಾವನ್ನಪ್ಪಿದ್ದು 2.20ಲಕ್ಷಕ್ಕೂ ಅಧಿಕ ಜನರು ಮನೆ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಗುರುವಾರ ಸಂಸತ್ತಿಗೆ ತಿಳಿಸಿದೆ.
ರಾಜ್ಯಸಭೆಯಲ್ಲಿ ಗಮನ ಸೆಳೆಯುವ ಸೂಚನೆಗೆ ಪ್ರತಿಕ್ರಿಯೆ ನೀಡಿದ ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಈ ಮಾಹಿತಿ ನೀಡಿದರು.
ಕರ್ನಾಟಕಕ್ಕೆ ನೈಸರ್ಗಿಕ ವಿಕೋಪ ಪರಿಹಾರ ನಿಧಿಯಿಂದ ಗರಿಷ್ಠ ಮೊತ್ತವನ್ನು ನೀಡಲಾಗಿದೆ. ಆದರೆ ಅದು ಹಣವನ್ನು ಬಳಕೆ ಮಾಡಿಕೊಳ್ಳಲು ವಿಫಲವಾಗಿದೆ ಎಂದು ಹೇಳಿದರು.
ಕೇಂದ್ರ ತಂಡವು, ಹಾನಿಯ ಬಗ್ಗೆ ವರದಿ ನೀಡಿದಾಗ, ಹೆಚ್ಚುವರಿ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ಯಾವುದೇ ರೀತಿಯ ಭೇದಭಾವ ಮಾಡುತ್ತಿಲ್ಲ ಎಂದು ಸಚಿವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಸುಮಾರು 2.40 ಲಕ್ಷ ಹೆಕ್ಟೇರ್ನಷ್ಟು ಬೆಳೆ ನಾಶವಾಗಿದೆ. ಸುಮಾರು 20 ರಾಜ್ಯಗಳು ಪ್ರವಾಹ ಪರಿಸ್ಥಿತಿ ಸಮಸ್ಯೆ ಎದುರಿಸಿವೆ ಎಂದು ವಿವರಿಸಿದರು.
ಗುಜರಾತಿನಲ್ಲಿ ಸಂಭವಿಸಿದ ನೆರೆ ಹಾವಳಿಗೆ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರು ₹500ಕೋಟಿ ಪರಿಹಾರ ಘೋಷಿಸಿದ್ದು, ಬೇರೆ ಕಡೆಗೆ ತಾರತಮ್ಯ ಮಾಡುತ್ತಿದ್ದಾರೆ ಎಂಬ ಹಲವು ಸದಸ್ಯರ ದೂರಿಗೆ ಅವರು ಈ ಪ್ರತಿಕ್ರಿಯೆ ನೀಡಿದರು.
ಈ ₹500ಕೋಟಿಯು ಗುಜರಾತ್ ಸರ್ಕಾರದ ಪರಿಹಾರ ನಿಧಿಯಿಂದ ಘೋಷಿಸಿದ್ದೇ ವಿನಾ ಕೇಂದ್ರ ಪರಿಹಾರ ನಿಧಿಯಿಂದ ಅಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.