ಆದಾಯ ತೆರಿಗೆ ಕಾನೂನು ಸರಳಗೊಳಿಸುವುದಾಗಿ ಮೊರಾರ್ಜಿ ಪ್ರಮಾಣ
ನವದೆಹಲಿ, ಜುಲೈ 27– ದೇಶದ ಆದಾಯ ತೆರಿಗೆ ಕಾನೂನನ್ನು ಸರಳಗೊಳಿಸುವುದಾಗಿ ಹಣಕಾಸು ಸಚಿವ ಶ್ರೀ ಮೊರಾರ್ಜಿ ದೇಸಾಯಿಯವರು ಇಂದು ಲೋಕಸಭೆಯಲ್ಲಿ ಪ್ರಮಾಣ ಮಾಡಿದರು. ಇದರೊಂದಿಗೆ ಆ್ಯನುಟಿ ಠೇವಣಿ ಯೋಜನೆಯನ್ನು ಮುಂದಿನ ವರ್ಷ ರದ್ದುಮಾಡುವ ಸೂಚನೆಯನ್ನೂ ನೀಡಿದರು.
ಆ್ಯನುಟಿ ಠೇವಣಿ ಯೋಜನೆಯನ್ನು ರದ್ದುಗೊಳಿಸುವ ಬೇಡಿಕೆ ಬಂದಿದೆ. ಮುಂದಿನ ಬಜೆಟ್ ಮಂಡನೆ ಸಂದರ್ಭದಲ್ಲಿ ಈ ವಿಷಯದ ಕುರಿತು ಮಾತನಾಡುವುದಾಗಿ ಅವರು ತಿಳಿಸಿದರು.
ತುಂಬಿದ ತುಂಗೆ
ಶಿವಮೊಗ್ಗ, ಜುಲೈ 27– ತುಂಗಾ ನದಿಯು ಬಹುಮಟ್ಟಿಗೆ ಭರ್ತಿಯಾಗಿದೆ. ನೀರಿನ ಮಟ್ಟ 23 ಅಡಿಯನ್ನು ತಲುಪಿದ್ದು, ಅಪಾಯದ ಮಟ್ಟಕ್ಕಿಂತ ಕೇವಲ ಎರಡು ಅಡಿ ಕಡಿಮೆ ಇರುವುದಾಗಿ ತಿಳಿದುಬಂದಿದೆ.
ಶೃಂಗೇರಿ ಹಾಗೂ ತೀರ್ಥಹಳ್ಳಿ ಪ್ರದೇಶಗಳಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿದೆ. ಶಿವಮೊಗ್ಗದ ಹಲವೆಡೆಯಲ್ಲೂ ಮಳೆಯಾಗುತ್ತಿರುವ ವರದಿಯಾಗಿದೆ. ಪ್ರವಾಹ ಸಂಬಂಧ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿರುವುದಾಗಿ ಮುನಿಸಿಪಲ್ ಕಮಿಷನರ್ ಬಸವಪ್ಪ ನಾಯಕ್ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಸಭೆ ಕರೆದ ಇಂದಿರಾ ಗಾಂಧಿ
ನವದೆಹಲಿ, ಜುಲೈ 27– ಕೃಷ್ಣಾ–ಗೋದಾವರಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಮೈಸೂರು, ಆಂಧ್ರ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ. ಆಗಸ್ಟ್ 17 ಹಾಗೂ 18ರಂದು ದೆಹಲಿಯಲ್ಲಿ ಸಭೆ ನಡೆಯಲಿದೆ. ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರು ಈ ಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.